ಶಬರಿಮಲೆ, ಜ. 14 (ಪಿಟಿಐ)– ಕಳೆದ ಎರಡು ತಿಂಗಳ ‘ಪುಣ್ಯಯಾತ್ರೆ’ಯ ಸಂದರ್ಭದಲ್ಲಿ ಸುಮಾರು ಐದು ಕೋಟಿ ಭಕ್ತರು ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದು, ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ.
ಕಳೆದ ವರ್ಷ ಈ ಅವಧಿಯಲ್ಲಿ ಮೂರು ಕೋಟಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ‘ನಾಡವರವು’ನಿಂದ 16.5 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಈ ವರ್ಷ ರೂ. 20 ಕೋಟಿ ಸಂಗ್ರಹವಾಗಿದೆ ಎಂದು ದೇವಸ್ಥಾನ ಮಂಡಳಿಯ ಅಧ್ಯಕ್ಷ ಭಾಸ್ಕರನ್ ನಾಯರ್ ತಿಳಿಸಿದರು.
ರಾಜಕಾರಣಿ ಹಸ್ತಕ್ಷೇಪ ಸಹಿಸದ ಶೇಷನ್
ಕೊಚ್ಚಿ, ಜ. 14 (ಪಿಟಿಐ)– ಚುನಾವಣಾ ಪ್ರಕ್ರಿಯೆಗಳಲ್ಲಿ ವಿನಾಕಾರಣ ಮೂಗು ತೂರಿಸುವ ರಾಜಕಾರಣಿಗಳ ವೈಖರಿಯನ್ನು ಟೀಕಿಸಿದ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರು, ತಾವು ಆಯುಕ್ತರಾಗುವ ಮೊದಲು ನಡೆದ ಚುನಾವಣೆಗಳು ‘ದೊಡ್ಡ ತಮಾಷೆ’ ಎಂದು ವ್ಯಂಗ್ಯವಾಡಿದರು.
ಇಲ್ಲಿಯ ಸೇಂಟ್ ಆಲ್ಬರ್ಟ್ ಕಾಲೇಜಿನ ಸಾಮಾಜಿಕ– ಆರ್ಥಿಕ ಅಧ್ಯಯನ ವೇದಿಕೆಯು ಏರ್ಪಡಿಸಿದ್ದ ‘ಭಾರತದಪ್ರಜಾಪ್ರಭುತ್ವ’ ಕುರಿತು ಅವರು ಉಪನ್ಯಾಸ ನೀಡುತ್ತಿದ್ದರು.
‘ಕೆಲವೇ ಜನರಿಂದ ಕೆಲವೇ ಜನರಿಗಾಗಿರುವುದೇ ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಇರುವ ಅರ್ಥ’ ಎಂದು ಅವರು ಕಟಕಿಯಾಡಿದರು.
ಕಾಂಗ್ರೆಸ್ ಬಿಕ್ಕಟ್ಟಿಗೆ ಅಧಿವೇಶನ ನಂತರವೇ ಸರ್ವಸಮ್ಮತ ಪರಿಹಾರ ಸಂಭವ
ನವದೆಹಲಿ, ಜ. 14– ಕರ್ನಾಟಕದ ಬಿಕ್ಕಟ್ಟಿಗೆ ಸರ್ವಸಮ್ಮತ ಪರಿಹಾರ ಕಂಡು ಹಿಡಿಯಲು ಕಾಂಗೈ ಹೈಕಮಾಂಡ್ ಈಗ ಕಾರ್ಯತಂತ್ರ ರೂಪಿಸಲು ತೊಡಗಿದೆ. ಆದರೆ ಈಗ ಮುಂದೂಡಿರುವ ವಿಧಾನ ಮಂಡಲದ ಅಧಿವೇಶನ ಹೇಗೆ ನಡೆಯುತ್ತದೆ ಎಂಬುದನ್ನು ಮೊದಲು ನೋಡಿಕೊಂಡು ಬಿಕ್ಕಟ್ಟನ್ನು ಬಗೆಹರಿಸಲು ಹೈಕಮಾಂಡ್ ಬಯಸಿರುವುದಾಗಿ ಪಕ್ಷದ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.