ಮಾನವ- ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯು ಕಾಡಂಚಿನಗುಂಟ ಆನೆಕಂದಕಗಳನ್ನು ನಿರ್ಮಿಸಿತ್ತು. ಮಳೆನೀರಿನಿಂದ ಮಣ್ಣು ಹರಿದುಬಂದು ಆನೆಕಂದಕಗಳು ಮುಚ್ಚಿಹೋಗುತ್ತಿದ್ದುದರಿಂದ, ಕಾಡಂಚಿನಲ್ಲಿರುವ ರೈತರು ಜಮೀನಿನ ಸುತ್ತ ಬೇಲಿ ನಿರ್ಮಿಸಿ, ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ, ಆನೆಗಳ ಸಾವಿಗೆ ಕಾರಣರಾಗುತ್ತಿದ್ದರು. ಇದನ್ನು ಮನಗಂಡು ಸರ್ಕಾರ 2019ರಲ್ಲಿ ಉಕ್ಕಿನ ರೈಲು ಕಂಬಿಗಳ ಬೇಲಿ ನಿರ್ಮಿಸಲು ಕ್ರಮ ಕೈಗೊಂಡಿತು. ಬಂಡೀಪುರದ ಕಾಡಂಚಿನಲ್ಲಿ ಬೇಲಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಇತ್ತೀಚೆಗೆ ಆನೆಯೊಂದು ಬಂಡೀಪುರ ಹುಲಿ ಯೋಜನೆಯ ಎನ್.ಬೇಗೂರು ವಲಯದ ಬಸಾಪೂರ ಗ್ರಾಮದ ಬಳಿ ಬೇಲಿಯ ಕಂಬವನ್ನು ಮುರಿದುಹಾಕಿರುವುದು ವರದಿಯಾಗಿದೆ.