ಹಳ್ಳಿಗರ ಸಮಸ್ಯೆಗಳಿಗೆ ಮನೆ ಬಾಗಿಲಲ್ಲೇ ಪರಿಹಾರ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಯೋಜನೆ ಒಂದಷ್ಟು ಭರವಸೆ ಮೂಡಿಸಿದೆ. ಈ ವಿಶಿಷ್ಟ ಚಿಂತನೆಗೆ ಅಭಿನಂದನೆ ಸಲ್ಲಬೇಕು. ಜಿಲ್ಲಾಧಿಕಾರಿಗಳು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ, ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಪರಿಹಾರ ನೀಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಪಿಂಚಣಿ, ಆಶ್ರಯ ಯೋಜನೆ, ಪಹಣಿ, ಸ್ಮಶಾನ, ಮತದಾರರ ಪಟ್ಟಿ ಪರಿಷ್ಕರಣೆ, ಬಿಪಿಎಲ್ ಕಾರ್ಡ್ ವ್ಯವಸ್ಥೆ, ಪೋಡಿ ಮೊದಲಾದವುಗಳಿಗೆ ಸಂಬಂಧಿಸಿದಂತೆ ಅನೇಕ ಎಡರುತೊಡರುಗಳು ಇರುತ್ತವೆ. ಅವುಗಳಿಗೆ ಸ್ಥಳದಲ್ಲೇ ಪರಿಹಾರ ದೊರೆತರೆ ಫಲಾನುಭವಿಗಳಿಗೆ ಅಷ್ಟರಮಟ್ಟಿಗೆ ನೆಮ್ಮದಿ.