ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಹರಡುವಿಕೆ ತಡೆಯಲು ಸರ್ಕಾರವು ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರುವುದು ಸೂಕ್ತ ನಿರ್ಧಾರವಾಗಿದೆ. ಹೊಸ ವರ್ಷದ ಸಂಭ್ರಮದ ನೆಪದಲ್ಲಿ ಯುವಜನ ಮೈಮರೆತು ಗುಂಪು ಗುಂಪಾಗಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಒಂದೆಡೆ ಸೇರಿ ಸಂಭ್ರಮಿಸುವುದು ಸಾಮಾನ್ಯ. ಓಮೈಕ್ರಾನ್ ಹರಡುವಿಕೆ ಕುರಿತು ಆತಂಕ ಇರುವ ಈ ಸಂದರ್ಭದಲ್ಲಿ ನಾಡಿನ ಜನರ ಸುರಕ್ಷತೆ ದೃಷ್ಟಿಯಿಂದ ತಜ್ಞರ ಸಲಹೆ ಮೇರೆಗೆ, ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ ಮಾಡಿರುವುದು ಸರಿಯಾಗಿದೆ.