ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಭೈರಸಂದ್ರ ಪ್ರದೇಶದಲ್ಲಿ ಕಿಡಿಗೇಡಿಗಳು ನಡೆಸಿದ ಕೃತ್ಯ ಖಂಡನೀಯ. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಪ್ರಬಲ ಶಕ್ತಿಗಳನ್ನು ಶಿಕ್ಷಿಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ.
ಈ ಪುಂಡಾಟಿಕೆಯ ನಡುವೆಯೂ ಮುಸ್ಲಿಂ ಯುವಕರು ಹಿಂದೂಗಳ ದೇವಾಲಯವನ್ನು ರಕ್ಷಿಸಿರುವುದು ಶ್ಲಾಘನೀಯ. ಇಂತಹ ಕೋಮು ಸೌಹಾರ್ದವನ್ನು ಕಾಪಾಡಿದ ಮತ್ತೊಂದು ಘಟನೆ ಹೈದರಾಬಾದ್ ಪ್ರಾಂತ್ಯದಲ್ಲಿ ನಡೆದದ್ದು ನೆನಪಿಗೆ ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಹೈದರಾಬಾದ್ ಸಂಸ್ಥಾನವು ಭಾರತದ ಒಕ್ಕೂಟದಲ್ಲಿ ಸೇರಲು ರಜಾಕಾರ್ ಸ್ವಯಂ ಸೇವಕರು ವಿರೋಧಿಸಿದರು. ಆ ಸಮಯದಲ್ಲಿ ಈ ರಜಾಕಾರರು ಹಿಂದೂಗಳ ಮೇಲೆ ದೌರ್ಜನ್ಯವೆಸಗಿದರು. ಆ ಸಮಯದಲ್ಲಿ ಹಿಂದೂಗಳನ್ನು ರಜಾಕಾರರ ದೌರ್ಜನ್ಯದಿಂದ ಮುಸ್ಲಿಮರು ರಕ್ಷಿಸಿದರು. ನಿಜಾಮರ ಕಾಲದಿಂದಲೂ ಹಿಂದೂ– ಮುಸ್ಲಿಮರ ಭಾವೈಕ್ಯ ಆದರ್ಶವಾಗಿದೆ.