ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರನ್ನು ಕಂಡು ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದ ಚಿತ್ರಸಹಿತ ವರದಿ (ಪ್ರ.ವಾ., ಡಿ.13) ನೋಡಿ ಬಹಳ ಆನಂದವಾಯಿತು. ಚುನಾವಣಾ ಸಂದರ್ಭದಲ್ಲಿ ಇದೇ ನಾಯಕರು ಮನಸೋಇಚ್ಛೆ ಮಾತನಾಡಿ, ಪರಸ್ಪರ ಹೀಗಳೆದು ಮಾಧ್ಯಮಗಳಿಗೆ ಆಹಾರವಾಗುತ್ತಾರೆ. ಇದರ ಬದಲು, ಹೀಗೆ ಎಲ್ಲರೂ ನಗುನಗುತ್ತಾ ಖುಷಿಯಾಗಿ, ಸಮಸ್ಯೆಗಳನ್ನು ಸೌಹಾರ್ದದಿಂದ ಪರಿಹರಿಸಿಕೊಂಡು, ಆರೋಗ್ಯಕರ ಸ್ಪರ್ಧೆಯಲ್ಲಿ ಗೆದ್ದರೆ ಎಷ್ಟೋ ಕಾರ್ಯಕರ್ತರು ನೆಮ್ಮದಿಯಿಂದ ಇರುತ್ತಾರೆ, ಹಳ್ಳಿ ಹಳ್ಳಿಗಳು ತಣ್ಣಗಿರುತ್ತವೆ. ರಾಜಕೀಯ ಅಂದರೆ ಶಾಶ್ವತ ದ್ವೇಷ ಅಲ್ಲ ಎಂಬುದನ್ನು ಈ ವರದಿ ಸ್ಪಷ್ಟವಾಗಿ ಹೇಳುತ್ತದೆ.