ಉಪಚುನಾವಣೆ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಯಾವುದೇ ಒಂದು ಪಕ್ಷದ ಗೆಲುವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಂದು ಪಕ್ಷದಿಂದ ಹೊರಬಂದ ಶಾಸಕರು ‘ಅನರ್ಹ’ ಎಂಬ ಹಣೆಪಟ್ಟಿ ಅಂಟಿಸಿಕೊಂಡರು. ಅವರು ಮತ್ತೊಂದು ಪಕ್ಷದಿಂದ ಕಣಕ್ಕಿಳಿದು ಈಗ ವಿಜಯಮಾಲೆ ಧರಿಸಿದ್ದಾರೆ. ಇದನ್ನು ನೋಡಿದರೆ, ಇವರು ಮುಂದೆ ಬೇರೊಂದು ಪಕ್ಷದ ಚಿಹ್ನೆ ಅಡಿಯಲ್ಲಿ ಕಣಕ್ಕಿಳಿದರೂ ತಮ್ಮ ವರ್ಚಸ್ಸಿನಿಂದ ಗೆಲ್ಲುವ ಸಾಧ್ಯತೆ ಹೆಚ್ಚು. ಆದ್ದರಿಂದ ಯಾವುದೇ ಪಕ್ಷ ಗೆದ್ದೆವು ಎಂದು ಬೀಗುವ ಅಥವಾ ಸೋತೆವು ಎಂದು ಚಿಂತಿಸುವ ಅಗತ್ಯವಿಲ್ಲ. ಗೆಲ್ಲುವ ಕುದುರೆಗಳಷ್ಟೇ ಬೇರೆ ಪೋಷಾಕು ಧರಿಸಿ ಗೆದ್ದಿವೆ. ಇನ್ನು ಮುಂದಾದರೂ ಜನ
ಪ್ರತಿನಿಧಿಗಳು ಉಪಚುನಾವಣೆಯ ಸಂದರ್ಭ ಸೃಷ್ಟಿಸಿ, ಸಾರ್ವಜನಿಕರ ಕೋಟ್ಯಂತರ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.