ಅವನನ್ನು ಇರಿ, ಇವನನ್ನು ಕೊಚ್ಚು, ಕೊಲ್ಲು, ಇವನನ್ನು ಬೆಂಡೆತ್ತು, ಮೂಳೆ ಮುರಿ, ಸಾಯಿಬಡಿ– ಇಂಥಾವೆಲ್ಲಾ ಎಷ್ಟು ಸರಿ? ಹಿಂದೆ ಚರಿತ್ರೆಯಲ್ಲಿ ಆಗಿಹೋಗಿದ್ದು ಆಗಿಹೋಗಿದೆ. ಘಟಿಸಿದೆ, ಗತಿಸಿದೆ. ನೀನಲ್ಲದಿದ್ದರೆ ನಿಮ್ಮಪ್ಪನೋ, ನಿಮ್ಮಜ್ಜನೋ ಹೀಗೆ ಮಾಡಿದ್ದಾನೆಂದು ಈಗ ಪ್ರತೀಕಾರ ತೀರಿಸಿಕೊಳ್ಳಲು ಹೊರಟರೆ ರಣರಂಗವಾಗುತ್ತದೆ ನಮ್ಮ ಬದುಕು. ಅದರಿಂದ ಯಾರಿಗೂ ಲಾಭವಿಲ್ಲ. ಯಾವ ಮತಕ್ಕೂ ಏಳಿಗೆಯಿಲ್ಲ. ತನ್ಮೂಲಕ ಯಾವ ಧರ್ಮವೂ ಶ್ರೇಷ್ಠ ಆಗುವುದಿಲ್ಲ. ಇದು ಖಂಡಿತ. ಅದರಿಂದ ಎರಡೂ ಕಡೆ ಪರಸ್ಪರ ಸಂಘರ್ಷವಾಗಿ ನೆಮ್ಮದಿಯ ಬಾಳು ಹಾಳಾಗುತ್ತದೆ.