‘ಬಿಜೆಪಿ ವಿತರಿಸುವ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ನನಗೆ ಅವರು ಕೊಡುವ ಲಸಿಕೆಯ ಮೇಲೆ ನಂಬಿಕೆ ಇಲ್ಲ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೇ ಪಕ್ಷದ ಶಾಸಕ ಅಶುತೋಷ್ ಸಿನ್ಹಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಈ ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ’ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್, ಕಾಂಗ್ರೆಸ್ನ ಹಿರಿಯ ನಾಯಕ ಜೈರಾಂ ರಮೇಶ್ ಹಾಗೂ ಸಿಪಿಎಂನ ಸೀತಾರಾಂ ಯೆಚೂರಿ ಕೂಡಾ ಇನ್ನೂ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯನ್ನೇ ನಡೆಸದೆ ಕೋ-ವ್ಯಾಕ್ಸಿನ್ ಲಸಿಕೆ ನೀಡಲು ಅನುಮೋದನೆ ಕೊಟ್ಟಿರುವುದು ಅಪಾಯಕಾರಿ, ಅಕಾಲಿಕ ಹಾಗೂ ಅವಸರದ ಕ್ರಮ ಎಂದು ಆಕ್ಷೇಪಿಸಿದ್ದಾರೆ.