ಎರಡನೇ ಅಲೆಯ ಹೊಡೆತವನ್ನು ತಡೆಯಲು ಸರ್ಕಾರ ಎಷ್ಟು ವಿಚಕ್ಷಣೆಯಿಂದ ಸಿದ್ಧತೆ ಮಾಡಿಕೊಂಡಿತ್ತು ಎನ್ನುವುದಕ್ಕೆ ರಾಜ್ಯದಲ್ಲಿ ಜನರನ್ನು ದಿಕ್ಕೆಡಿಸುತ್ತ ಏರುತ್ತಿರುವ ಕೋವಿಡ್ ಪೀಡಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಗಳೇ ವಿಶ್ವಾಸಾರ್ಹ ಮಾಪಕಗಳಾಗಿವೆ. ಮೂರನೆಯ ಅಲೆ ಅಪ್ಪಳಿಸುವುದೂ ನಿಶ್ಚಿತವೆಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹೀಗಿರುವಾಗ, ಮುಂಜಾಗ್ರತಾ ಕ್ರಮವಾಗಿ ಇನ್ನಷ್ಟು ಯಂತ್ರಗಳ ಸಂಗ್ರಹದ ಅಗತ್ಯವನ್ನು ವೈದ್ಯರೊಬ್ಬರು ಹೇಳಿದಾಗ, ಸಚಿವರ ನಿಷ್ಕಾಳಜಿ ಖಂಡನಾರ್ಹ. ಇಷ್ಟೇ ಸಾಲದೆಂಬಂತೆ ಸಚಿವರ ಮಾತನ್ನು ಕೇಳಿ ಡಾಕ್ಟರ್ ರವಿ, ‘ಆಗ ನಾವು ಉಳಿದಿರುತ್ತೇವೋ ಇಲ್ಲವೋ’ ಎಂದು ಉದ್ಗರಿಸಿದ್ದಕ್ಕೆ ಸಚಿವ ಕತ್ತಿ, ‘ನೀವು ಉಳಿಯುವಿರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು’ ಎಂದು ವಿವೇಕವಿಲ್ಲದ ಉದ್ಧಟತನದ ಮಾತನ್ನಾಡಿದ್ದಾರೆ. ಇಂತಹ ಸ್ವಾರ್ಥಿಗಳು ನಮ್ಮ ನಾಯಕರಾಗಿ ಬಂದಾಗ, ಜನರು ದುರ್ಗತಿಯನ್ನಲ್ಲದೆ ಇನ್ನೇನನ್ನು ಅನುಭವಿಸಿಯಾರು?