ರಜೆಯ ಸಂಭ್ರಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಮೀಮ್ಸ್ ಬಿಟ್ಟು ಖುಷಿಪಡುವವರಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಎಷ್ಟೋ ಜನರು ಮಳೆಯಿಂದಾಗಿ ತಮ್ಮ ಮನೆ-ಮಠ, ಆಸ್ತಿ, ಹೊಲ- ತೋಟಗಳ ಹಾನಿಯಿಂದ ನಷ್ಟವನ್ನು ಅನುಭವಿಸುತ್ತಿರುತ್ತಾರೆ ಎಂಬ ಸಂಗತಿ ಅವರ ಅರಿವಿಗೆ ಬರುವುದಿಲ್ಲ. ಹೀಗಾಗಿ, ರಜೆಯ ಕಾರಣಕ್ಕೆ ಸಂಭ್ರಮಪಡದೆ, ಮಳೆಯಿಂದ ಸಂತ್ರಸ್ತರಾದವರು ಹಾಗೂ ತೀವ್ರ ನಷ್ಟ ಅನುಭವಿಸುವವರಿಗೆ ನಮ್ಮ ಕೈಲಾದಷ್ಟು ನೆರವಾಗೋಣ. ಅವರ ಕಷ್ಟಕ್ಕೆ ಸ್ಪಂದಿಸುತ್ತ ಮಾದರಿಯಾಗೋಣ. ಮಕ್ಕಳು ರಜೆಯನ್ನು ಪಠ್ಯಗಳ ಅಧ್ಯಯನ ಹಾಗೂ ಏನನ್ನಾದರೂ ಹೊಸದನ್ನು ಕಲಿಯಲು ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದು.