ಪರಿಸರ ಜಾಗೃತಿ ಕಾರ್ಯಕ್ರಮಗಳು ಪ್ರಾಥಮಿಕ, ಪ್ರೌಢಶಾಲೆ ಮಕ್ಕಳಿಗೆ ಮಾತ್ರ ಎಂದು ಭಾವಿಸಬಾರದು. ಅಂತಹ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಅಲ್ಲಿರುವ ಎನ್ಸಿಸಿ, ಎನ್ಎಸ್ಎಸ್ ಘಟಕಗಳನ್ನು ಈ ಉದ್ದೇಶಕ್ಕೆ ವರ್ಷವಿಡೀ ಬಳಸಿಕೊಳ್ಳಬೇಕು. ಬರೀ ಅಕೇಷಿಯಾ ಗಿಡಗಳನ್ನು ನೆಡದೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಜಾಗತಿಕ ತಾಪಮಾನ, ಅಂತರ್ಜಲದ ಮಹತ್ವ, ವನ್ಯಜೀವಿಗಳ ರಕ್ಷಣೆ, ಓಝೋನ್ ಪದರ, ಹಸಿರುಮನೆ ಪರಿಣಾಮ ಮುಂತಾದ ವಿಷಯಗಳ ಬಗ್ಗೆ ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸಬೇಕು. ಹಾಗಾದಲ್ಲಿ ಮಾತ್ರ ನಮ್ಮ ಭಾವಿ ಪೀಳಿಗೆಗೆ ಸುಂದರ ಪರಿಸರ ಉಳಿಯುತ್ತದೆ.