ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಜೂಜಾಟದಲ್ಲಿ ತನ್ನಲ್ಲಿದ್ದ ಎಲ್ಲಾ ಹಣವನ್ನು ಕಳೆದುಕೊಂಡು, ಕೊನೆಗೆ ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಸೋತಿರುವುದು (ಪ್ರ.ವಾ., ಡಿ. 15) ದಿಗ್ಭ್ರಮೆ ಹುಟ್ಟಿಸುವಂತಿದೆ. ಆ ಆಟದಲ್ಲಿ ಗೆದ್ದವರು ಆತನ ಪತ್ನಿಯನ್ನು ಸಾಮೂಹಿಕವಾಗಿ ಬಲಾತ್ಕಾರ ಮಾಡಿದ್ದಂತೂ ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಸಂಗತಿ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆದರ್ಶಪ್ರಾಯವಾಗಿರುವ ಮಹಾಭಾರತದಲ್ಲಿ ಪಾಂಡವರು ಪಗಡೆ ಎಂಬ ಜೂಜಾಟದಲ್ಲಿ ತಮ್ಮ ರಾಜ್ಯ, ಆಸ್ಥಾನ ಸೇರಿದಂತೆ ಸರ್ವಸ್ವವನ್ನೂ ಪಣಕ್ಕಿಟ್ಟು ಸೋತು, ಕೊನೆಗೆ ತಮ್ಮ ಪತ್ನಿಯಾದ ದ್ರೌಪದಿಯನ್ನೂ ಪಣಕ್ಕಿಟ್ಟು ಕಳೆದುಕೊಳ್ಳುತ್ತಾರೆ. ನಮ್ಮ ಬದುಕಿಗೆ ಇದು ಪಾಠವಾಗಬೇಕೇ ಹೊರತು ದುಷ್ಕೃತ್ಯಕ್ಕೆ ಪ್ರೇರಣೆಯಾದದ್ದು ದುರಂತವೇ ಸರಿ. ನಮ್ಮದು ಪ್ರಜ್ಞಾವಂತ ನಾಗರಿಕ ಸಮಾಜವೆಂದು ಕರೆಯಲು ಸಾಧ್ಯವೇ?