ಸುಮಾರು 70, 80ರ ದಶಕದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಅಸ್ಮಿತೆಯಂತೆ, ಅಲ್ಲಿನ ಜನರಿಗೆ ಜೀವನದಿಯಂತೆ ಇದ್ದ ಗುಂಡ್ಲು ನದಿಯ ಹುಟ್ಟಿನ ಜಾಡು ಹಾಗೂ ಅದು ಹರಿದು ಬರುತ್ತಿದ್ದ ಮಾರ್ಗ ಇಂದು ಮಾನವರ ದುರಾಸೆಯ ಫಲವಾಗಿ ಕಣ್ಮರೆಯಾಗಿವೆ. ಅದರ ಪರಿಣಾಮವಾಗಿ ತಾಲ್ಲೂಕಿನ ಜನತೆ ಹನಿ ಹನಿ ನೀರಿಗೂ ಪರಿತಪಿಸುವಂತಾಗಿದೆ. ಇಂತಹ ಜೀವನದಿಯ ಜೀವಂತಿಕೆಗಾಗಿ ತಾಲ್ಲೂಕಿನ ಕೆಲವು ಜನಪರ ಚಿಂತಕರು ‘ಗುಂಡ್ಲು ನದಿ ಅಭಿಯಾನ’ವನ್ನು ಆರಂಭಿಸಿದ್ದು, ಇದಕ್ಕೆ ಸ್ಥಳೀಯರೆಲ್ಲ ಒಗ್ಗಟ್ಟಿನಿಂದ ಕೈ ಜೋಡಿಸುವುದು ಅನಿವಾರ್ಯವಾಗಿದೆ.