‘ರಾಜಕೀಯ ಪಕ್ಷಗಳ ಆದಾಯ ಅನಾಮಧೇಯ’ ಸುದ್ದಿ (ಪ್ರ.ವಾ., ಸೆ. 7) ಓದಿ ಆಘಾತವಾಯಿತು. ರಾಜಕೀಯ ಪಕ್ಷಗಳು ಯಾವ ಘನ ಸಾಧನೆಗಾಗಿ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸುತ್ತವೆ? ನೂರಾರು ಕೋಟಿ ದೇಣಿಗೆ ನೀಡುವವರು ಯಾರ ಹಿತಕ್ಕಾಗಿ ನೀಡುತ್ತಾರೆ? ಜನಸಾಮಾನ್ಯರಂತೂ ಹೀಗೆ ಕೊಡುವುದು ಸಾಧ್ಯವಿಲ್ಲ. ಉದ್ದಿಮೆದಾರರು ಒಳ ಹಿತಾಸಕ್ತಿ ಇಲ್ಲದೆ ತಾವೂ ಕೊಡಲಾರರು. ಹೀಗೆ ಕೊಡುವವರು ಸರ್ಕಾರದಿಂದ ಪಡೆಯುವ ಪ್ರತಿಫಲ ಯಾವ ಬಗೆಯದು? ಈ ಕ್ರಿಯೆ ಅನಧಿಕೃತ ಅಕ್ರಮಗಳಿಗೆ ಎಡೆ ಮಾಡಿಕೊಟ್ಟಿಲ್ಲ ಎಂಬುದಕ್ಕೆ ವಿವರಣೆ ಎಲ್ಲಿದೆ? ಚುನಾವಣಾ ಅಕ್ರಮಗಳಿಗೂ ಈ ದೇಣಿಗೆ ಬಳಕೆಯಾಗದಿರದೇ? ಕಪ್ಪುಹಣವನ್ನು ಬಿಳಿಯದಾಗಿಸಿಕೊಳ್ಳುವ ತಂತ್ರವೂ ಇಲ್ಲಿ ಇರಲಾರದೇ?