ಶ್ರದ್ಧಾ ವಾಲಕರ್ ಬರ್ಬರ ಹತ್ಯೆ ಪ್ರಕರಣ ಜನಮಾನಸದಿಂದ ಮರೆಯಾಗುವ ಮುನ್ನವೇ ಅಂತಹದ್ದೇ ಮತ್ತೊಂದು ಪ್ರಕರಣ ದೆಹಲಿಯಿಂದ ವರದಿಯಾಗಿರುವುದು ದುರದೃಷ್ಟಕರ. ಅಕ್ರಮ ಸಂಬಂಧ ಹೊಂದಿದ್ದರೆಂದು ದೂರಿ ವ್ಯಕ್ತಿಯೊಬ್ಬರನ್ನು ಅವರ ಎರಡನೇ ಪತ್ನಿ ಮತ್ತು ಮಲಮಗ ಸೇರಿ ಕೊಂದು, ದೇಹದ ತುಂಡುಗಳನ್ನು ಫ್ರಿಡ್ಜ್ನಲ್ಲಿ ಇಟ್ಟು, ಕೊನೆಗೆ ರಾತ್ರಿಯ ವೇಳೆ ಮೈದಾನವೊಂದಕ್ಕೆ ಎಸೆದಿದ್ದಾರೆ ಎಂದು ವರದಿಯಾಗಿದೆ. ಕಾರಣ ಏನೇ ಇರ ಬಹುದು, ಮನುಷ್ಯ ಹೀಗೆ ಮನುಷ್ಯನನ್ನೇ ತುಂಡು ತುಂಡು ಮಾಡಿ ಕೊಲ್ಲುವಷ್ಟು ಕ್ರೂರಿಯಾಗಲು ಸಾಧ್ಯವೇ ಎನ್ನುವ ಪ್ರಶ್ನೆ ಕಾಡುತ್ತದೆ. ವ್ಯಕ್ತಿ ತಪ್ಪು ಮಾಡಿದ್ದರೆ ಶಿಕ್ಷೆ ನೀಡಲು ಕಾನೂನು ವ್ಯವಸ್ಥೆ ಇದೆ. ಸ್ವತಃ ಕಾನೂನು ಕೈಗೆತ್ತಿಕೊಳ್ಳ ಬಾರದು. ತಪ್ಪು ಮಾಡಿದಾಗ ಕೊಲ್ಲುವುದೇ ಪರಿಹಾರ ಎಂದಾದರೆ, ನಮ್ಮ ಸಮಾಜ ಎಲ್ಲಿಗೆ ಹೋಗಿ ಮುಟ್ಟುತ್ತದೆ? ಬದಲಾಗುತ್ತಿರುವ ಪ್ರಪಂಚದಲ್ಲಿ ತಂತ್ರಜ್ಞಾನದ ಜೊತೆಗೆ ನೀತಿ ಪಾಠಗಳು, ಸಂಬಂಧಗಳ ಮಹತ್ವ ಅರಿಯುವ ಅಗತ್ಯವಿದೆ.