ಕನ್ನಡದ ಅಸ್ಮಿತೆಗಳಲ್ಲಿ ಒಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಹತ್ತಿರವಾಗುತ್ತಿದೆ. ಹೊಸದಾಗಿ ಆಯ್ಕೆಯಾಗಲಿರುವ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರು ಪರಿಷತ್ತಿಗೆ ಹೊಸ ಸ್ಪರ್ಶ ನೀಡುವ ಆಲೋಚನೆ ಮಾಡಬೇಕಿದೆ. ಕಸಾಪ ಎಂದರೆ ಸಾಹಿತ್ಯ ಸಮ್ಮೇಳನ ನಡೆಸುವುದು ಎಂಬ ಭಾವನೆ ಹೋಗಲಾಡಿಸಿ, ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತಾಗಿ ಅರ್ಥಪೂರ್ಣ ಚಟುವಟಿಕೆಗಳಿಗೆ ಚಾಲನೆ ನೀಡಬೇಕಿದೆ. ತುಂಬಾ ಪ್ರಸ್ತುತ ಆದರೆ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಈ ದಿಸೆಯಲ್ಲಿ ಜಿಲ್ಲಾ ಘಟಕಗಳು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಕಾರ್ಯಾಗಾರಗಳನ್ನು ನಡೆಸಬಹುದು. ಯುವ ಬರಹಗಾರರನ್ನು ಗುರುತಿಸಿ ಸೃಜನಶೀಲ ಬರಹಗಳಿಗೆ ಪ್ರೋತ್ಸಾಹ ನೀಡಬಹುದು.