ಇನ್ನೂ ಬೇಸಿಗೆಯೇ ಮುಗಿದಿಲ್ಲ, ಆದರೆ ಬೆಂಗಳೂರಿನಲ್ಲಿ ಈಚೆಗೆ ಸುರಿದ, ಸುರಿಯುತ್ತಿರುವ ಮಳೆಗೆ ಮನೆಗಳೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಒಂದೆರಡು ಮಳೆಗೇ ಹೀಗಾದರೆ ಮುಂದಿನ ದಿನಗಳಲ್ಲಿ ಅದೂ ಮಳೆಗಾಲದಲ್ಲಿ ಹೇಗೆ ಎಂಬ ಚಿಂತೆ ಕಾಡದಿರದು. ಈ ಹಿಂದೆ ರಾಜಕೀಯ ಬೆಂಬಲವಿಲ್ಲದ, ಸಾಮಾನ್ಯ ನಾಗರಿಕರ ಮನೆಗಳನ್ನು ರಾಜಕಾಲುವೆಯ ಅತಿಕ್ರಮಣವೆಂದು ಪರಿಗಣಿಸಿ ನಿರ್ದಾಕ್ಷಿಣ್ಯವಾಗಿ ಕೆಡವಿ ಹಾಕಲಾಗಿತ್ತು. ಕೆಲವು ಪ್ರಭಾವಿ ನಾಯಕರು, ಶ್ರೀಮಂತರು, ಚಿತ್ರನಟರ ಮನೆಗಳ ಗೊಡವೆಗೆ ಹೋಗಿರಲಿಲ್ಲ. ಎಂಥದ್ದೇ ಒತ್ತಡ ಬಂದರೂ ಅತಿಕ್ರಮಣವನ್ನು ತೆರವುಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದರು. ಆದರೆ, ಆಗಿನ ರೋಷಾವೇಶದ ಮಾತು ಗಳು ಅಲ್ಲಿಗೇ ನಿಂತು ಹೋದವು. ಮತ್ತೆ ಯಥಾಪ್ರಕಾರ ಅದೇ ಮಳೆ, ಮನೆಗೆ ನೀರು ನುಗ್ಗುವಿಕೆ, ರಾಜಕಾಲುವೆ ಒತ್ತುವರಿ ಕುರಿತ ಚರ್ಚೆ ಮುಂದುವರಿದಿವೆ.