ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿಯೇ ಸುಮಾರು ಒಂದೂವರೆ ಲಕ್ಷದಷ್ಟು ಮಕ್ಕಳು ಉಪಾಹಾರ ಇಲ್ಲದೆ ಶಾಲೆಗೆ ಹೋಗುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗಿರಬಹುದು. 2020ರ ಹಠಾತ್ ಲಾಕ್ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರು, ಮಹಿಳೆಯರು, ವಯೋವೃದ್ಧರು, ಮಕ್ಕಳು ಮತ್ತು ಅಂಗವಿಕಲರು ಊಟವಿಲ್ಲದೆ ನೂರಾರು ಮೈಲುಗಳು ನಡೆದು ಸಂಕಷ್ಟಕ್ಕೀಡಾಗಿದ್ದು, ಅವರಲ್ಲಿ ಕೆಲವರು ಸಾವಿಗೀಡಾಗಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಸಾವು-ನೋವುಗಳನ್ನು ಮರೆಯುವ ಮುನ್ನವೇ ವಿಭಿನ್ನ ಮತ್ತು ತೀಕ್ಷ್ಣವಾದ ರೀತಿಯಲ್ಲಿ ಕೋವಿಡ್ ಮರಳಿ ಬಂದಿದೆ. ಬೇಡಿಕೆ-ಪೂರೈಕೆಗಳ ಅಂತರ ಜಾಸ್ತಿಯಾಗಿ ಮುಗ್ಧ ಜನರ ಸಂಕಷ್ಟ ಮುಗಿಲು ಮುಟ್ಟಿದೆ.