ರೈತಾಪಿ ವರ್ಗ ಹೊಲ ಉಳುಮೆ ಮಾಡಿ ಆಗಸ ನೋಡುತ್ತಿದೆ. ಬಯಲುಸೀಮೆಯ ಮಂದಿ ಲೋಡುಗಟ್ಟಲೆ ಕಂಬಳಿಯನ್ನು ಮಲೆನಾಡಲ್ಲಿ ಇಳಿಸಿದ್ದಾಯಿತು. ವರ್ತಕರು ಕೊಡೆ, ಮಳೆ ದಿರಿಸು ‘ಸ್ಟಾಕ್’ ಮಾಡಿದ್ದೂ ಆಯಿತು. ಮಂಡೂಕಗಳಪಾಣಿಗ್ರಹಣ (ಮದುವೆ) ನಡೆಸಿದ್ದೂ ಆಯಿತು. ಪರ್ಜನ್ಯ ಜಪ, ಎಳನೀರ ಅಭಿಷೇಕ,
ಶತರುದ್ರಾಭಿಷೇಕಗಳು ದೇವಳಗಳಲ್ಲಿ ಸಾಗಿದವು. ಸಂಗೀತಗಾರರು ‘ಅಮೃತವರ್ಷಿಣಿ’ ರಾಗ ನುಡಿಸಿದ್ದಾಯಿತು. ಜೀರುಂಡೆ, ಕಪ್ಪೆಗಳು ‘ಕ್ಷೀಣ’ ದನಿಯಲ್ಲಿ ಎಂದಿನಂತೆ ಕೂಗಿ ತಮ್ಮ ಕಾರ್ಯ ಮುಗಿಸಿದವು! ಹವಾಮಾನ ಇಲಾಖೆ ದಿನಾಂಕ ತಿಳಿಸಿ, ಭವಿಷ್ಯ ಹೇಳುತ್ತಲೇ ಇದೆ. ಮಾಧ್ಯಮಗಳು ತಪ್ಪದೇ ಅದನ್ನು ಮಂದಿಗೆ ತಿಳಿಸುತ್ತಲೇ ಇವೆ.
ಏನೆಂದರೂ ಅವರವರ ಭಾವಕ್ಕೆ ಅವರವರ ಭಕುತಿಗೆ ಎಲ್ಲವೂ ನೆರವೇರುತ್ತಿವೆ. ಆದರೆ... ಮಳೆರಾಯ ಮಾತ್ರ ಮಿಸುಕಾಡುತ್ತಿಲ್ಲ! ಅವನ ಇರುವಿಕೆ, ಜೋರುಗಾರಿಕೆಯ ಕುರುಹು ಇಲ್ಲವೇ ಇಲ್ಲ. ಅವನಿಗೂ ಗೊತ್ತು, ಹುಲುಮಾನವರೇ ಸೃಷ್ಟಿಸಿಕೊಂಡ ‘ನರಕ’ ಇದೆಂದು! ಮುಂಗಾರಿನ ನಿರೀಕ್ಷೆ ಜೂನ್ ಕೊನೇ ವಾರದಲ್ಲೂ ನಿರೀಕ್ಷೆಯಲ್ಲೇ ಸಾಗಿದೆ. ಇದು ಸದ್ಯ ಮಲೆನಾಡಿನ ವಾಸ್ತವ. ಮುಂದಿನ ದಿನಗಳು ಭಯಾನಕವಾಗಿರದೆ ‘ಅತೀ’ ಭಯಾನಕವಾಗಿರಬಹುದು ಎಂದರೂ ತಪ್ಪಾಗಲಾರದು. ಇನ್ನಾದರೂ ಎಚ್ಚೆತ್ತುಕೊಳ್ಳಲಿ ಮಂದಿ ಜಲಸಂರಕ್ಷಣೆಯತ್ತ.