ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಭಾರತದಲ್ಲಿ ಎಲ್ಲವೂ ಕ್ಷೇಮ’ ಎಂಬರ್ಥದಲ್ಲಿ ಮಾತನಾಡಿರುವುದನ್ನು ವಿಶ್ಲೇಷಿಸಿರುವ ರಘುನಾಥ್ ಚ.ಹ. ಅವರ ಲೇಖನ (ಪ್ರ.ವಾ., ಸೆ. 30) ವಸ್ತುಸ್ಥಿತಿಯ ಉತ್ತಮ ಚಿತ್ರಣ. ಕೆಟ್ಟ ಸಾಮಾಜಿಕ ಪದ್ಧತಿಗಳು ಇನ್ನೂ ಜೀವಂತವಾಗಿರುವ ಇಂದಿನ ಸ್ಥಿತಿಯಲ್ಲಿ, ಎಲ್ಲವೂ ಕ್ಷೇಮ ಎಂದರೆ ಹೇಗೆ? ಅದೂ ದೇಶದ ಮುಖಂಡರಾಗಿ ಹೀಗೆ ಹೇಳಬಹುದೇ ಎಂಬ ಪ್ರಶ್ನೆ ಏಳುತ್ತದೆ. ಆದರೆ ಮನೆಯ ಯಜಮಾನ ಮನೆಯ ಹುಳುಕನ್ನು ಹೊರಗಿನವರ ಮುಂದೆ ಹೇಳುವುದೂ ತಪ್ಪಲ್ಲವೇ? ಒಬ್ಬ ಯಜಮಾನ ಅಥವಾ ಯಜಮಾನಿ ಮನೆಯಲ್ಲಿ ಎಷ್ಟೇ ತೊಂದರೆಗಳಿದ್ದರೂ, ಮನೆಯ ಸದಸ್ಯರು ತಪ್ಪು ದಾರಿ ಹಿಡಿದಿದ್ದರೂ, ಹೊರಗಿನವರ ಮುಂದೆ ಅದನ್ನೆಲ್ಲ ಹೇಳದೆ ಒಳ್ಳೆಯದನ್ನೇ ಹೇಳಿಕೊಳ್ಳುತ್ತಾರೆ.