ಫೋನ್ ಕದ್ದಾಲಿಕೆ ವಿಷಯವು ಪ್ರವಾಹ ಸಂತ್ರಸ್ತರ ಗೋಳನ್ನೂ ಮರೆಮಾಚಿಸುತ್ತಿದೆ. ರಾಜರ ಕಾಲದಿಂದಲೂ ಗೂಢಚಾರಿಕೆ ನಡೆದುಬಂದಿದೆ. ಕಳ್ಳಕಾಕರು, ರೌಡಿಗಳು, ಉಗ್ರಗಾಮಿಗಳು, ದರೋಡೆಕೋರರು, ಸಮಾಜಘಾತುಕರು, ಭ್ರಷ್ಟಾಚಾರಿಗಳು, ತೆರಿಗೆಕಳ್ಳರು, ದೇಶದ್ರೋಹಿಗಳು, ಸರ್ಕಾರದ ವಿರುದ್ಧ ಪಿತೂರಿ ನಡೆಸುವವರ ಫೋನ್ಗಳನ್ನು ರಾಜ್ಯ ಮತ್ತು ರಾಷ್ಟ್ರದ ತನಿಖಾ ಸಂಸ್ಥೆಗಳು, ಪೊಲೀಸರು ಕದ್ದಾಲಿಸುವುದು ಮಾಮೂಲಿ ಎಂಬಂತಾಗಿದೆ. ಅಗತ್ಯವಿದ್ದಾಗ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಒಪ್ಪಿಗೆ ಪಡೆಯುತ್ತಾರಾದರೂ ಅನೇಕ ಸಲ ಅನಧಿಕೃತವಾಗಿಯೂ ಕದ್ದಾಲಿಕೆ ನಡೆಯುತ್ತಿರುತ್ತದೆ. ಆದರೆ ಅವರು ಪ್ರಜೆಗಳ ಖಾಸಗಿತನಕ್ಕೆ ಧಕ್ಕೆ ತಾರದಂತೆ ಎಚ್ಚರ ವಹಿಸಬೇಕಾಗುತ್ತದೆ. ಇದೀಗ ಇರುವ ಹೊಸ ತಾಂತ್ರಿಕ ಉಪಕರಣಗಳಿಂದ ಟೆಲಿಫೋನ್ ಕದ್ದಾಲಿಕೆಯನ್ನು ಜನಸಾಮಾನ್ಯರೂ ಮಾಡಬಹುದು ಎಂದು ಹೇಳಲಾಗುತ್ತದೆ.