ಎಲ್ಲ ಮಕ್ಕಳನ್ನು ಒಟ್ಟಿಗೇ ಹೊರಗೆ ಬಿಟ್ಟಾಗ, ಕೆಲವು ಅನಾಹುತಗಳಾಗಿ ಪೋಷಕರ ಕಡೆಯಿಂದ ಕಿರಿಕಿರಿ ಅನುಭವಿಸಿದ ಶಿಕ್ಷಕರು, ಆಟದ ಅವಧಿಯೆಂದರೆ ಅದೊಂದು ಕೆಟ್ಟ ಅವಧಿ ಎಂದು ಭಾವಿಸಿರುವ ಸಾಧ್ಯತೆಯೇ ಹೆಚ್ಚು. ಇಂತಹ ಕೆಲವು ಕಹಿ ಘಟನೆಗಳಿಂದ ಕೈಸುಟ್ಟುಕೊಂಡ ಶಿಕ್ಷಕರು, ಮುಂದೆ ಅಧಿಕಾರಿಗಳಾಗಿ ಬಂದಾಗ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂತಹ ಮನಃಸ್ಥಿತಿ ಹೊಂದಿರಬಹುದು ಎಂಬುದನ್ನು ಊಹಿಸಬಹುದು. ಈ ಕಾರಣಕ್ಕೇ, ದೈಹಿಕ ಶಿಕ್ಷಣವನ್ನು ಶಾಸ್ತ್ರೀಯವಾಗಿ ತರಗತಿವಾರು ಬೋಧಿಸಬೇಕೆಂದು ಒತ್ತಾಯಿಸಿ ಹತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಅಂತಹ ಅಧಿಕಾರಿಗಳು, ತಜ್ಞರು ಎನಿಸಿಕೊಂಡವರಿಗೆ ಕಿವಿಯೇ ಕೇಳಿಸದಂತಾಗಿದೆ.