ಸರ್ಕಾರ ಏನೇ ಮಾಡಿದರೂ ಅದನ್ನು ವಿವೇಚನೆ ಇಲ್ಲದೆ ಸಮರ್ಥಿಸಲು ಕೆಲವರು ತುದಿಗಾಲಲ್ಲಿ ನಿಂತಿರುತ್ತಾರೆ. ಎ.ಸೂರ್ಯಪ್ರಕಾಶ ಅವರ ಅಂಕಣ ಬರಹ (ಪ್ರ.ವಾ., ಆ. 24) ಇದಕ್ಕೊಂದು ತಾಜಾ ಉದಾಹರಣೆ. ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ‘ಮೇಜರ್ ಧ್ಯಾನಚಂದ್ ಖೇಲ್ ರತ್ನ’ ಎಂದು ಬದಲಿಸಿರುವುದನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗುತ್ತಿದೆ ಎಂದಿದ್ದಾರೆ. ಆದರೆ ಧ್ಯಾನಚಂದ್ ಹೆಸರಿನ ಕ್ರೀಡಾ ಪ್ರಶಸ್ತಿಯೊಂದು ಈಗಾಗಲೇ ಇರುವಾಗ ಇನ್ನೊಂದು ಪ್ರಶಸ್ತಿಗೆ ಅವರ ಹೆಸರಿಡುವ ಅಗತ್ಯವೇನಿತ್ತು?
ನಿಜ, ಕಾಂಗ್ರೆಸ್ ಪಕ್ಷದ ನಿರಂತರ ಆಳ್ವಿಕೆಯಲ್ಲಿ ದೇಶದ ಪ್ರಮುಖ ಸ್ಥಳಗಳಿಗೆ ನೆಹರೂ, ಇಂದಿರಾ ಗಾಂಧಿ ಕುಟುಂಬದ ಹೆಸರುಗಳನ್ನೇ ಇಟ್ಟಿರುವುದು ದುರಂತ. ಆದರೆ ಹೊಸ ಸ್ಥಳ, ಪ್ರಶಸ್ತಿಗಳಿಗೆ ಇತರ ಪ್ರಸಿದ್ಧ ವ್ಯಕ್ತಿಗಳ ಹೆಸರಿಡುವ ಮೂಲಕ ಮೇಲ್ಪಂಕ್ತಿಯಾಗಬೇಕೆ ವಿನಾ ಈ ರೀತಿ ಇರುವ ಹೆಸರುಗಳನ್ನೇ ಬದಲಿಸುವ ಮೂಲಕ ಅಲ್ಲ.