ಜೀವನದ ಅಂತಿಮ ದಿನಗಳಲ್ಲಿ ಮನುಷ್ಯನನ್ನು ಆಂತರ್ಯದಲ್ಲಿ ಈ ಎರಡು ಪ್ರಶ್ನೆಗಳು ಕಾಡುತ್ತವೆ– ‘ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಮತ್ತು ನ್ಯಾಯಯುತವಾಗಿ ಬಾಳಿದ್ದೇನೆಯೇ? ನನ್ನನ್ನು ಸಮಾಜವು ಯೋಗ್ಯನೆಂದು ಪರಿಗಣಿಸಿದೆಯೇ?’ ಉತ್ತರವು ಇತ್ಯಾತ್ಮಕವಾಗಿದ್ದರೆ ಆ ವ್ಯಕ್ತಿಯ ಕೊನೆಯ ದಿನಗಳು ತೃಪ್ತಿ, ಸಂತೋಷದಿಂದ ಕೂಡಿರುತ್ತವೆ. ಇಂಥ ತೃಪ್ತಿಯು ಆತನ ಮುಂದಿರುವ ಎಲ್ಲಾ ದುಃಖಗಳನ್ನು ಮರೆಸಬಲ್ಲಷ್ಟು ಘನವಾದುದಾಗಿರುತ್ತದೆ. ಉತ್ತರಗಳು ನೇತ್ಯಾತ್ಮಕವಾಗಿದ್ದರೆ ಅವನ ಅಂತಿಮ ದಿನಗಳು ಹತಾಶೆಯಿಂದ ಕೂಡಿದವೂ ಅಸಹನೀಯವೂ ಆಗಿರುತ್ತವೆ. ಆ ನೋವು, ಅವನ ಸುಖ–ಸಂತೋಷವನ್ನು ನುಂಗಿ ನೊಣೆಯುವಷ್ಟು ಭೀಕರವಾದುದಾಗಿರುತ್ತದೆ.