ಕಾನೂನು, ನಿಯಮ ಎಂಬುದು ನಮ್ಮ ದೇಶದಲ್ಲಿ ಕಾಲಿನ ಕಸಕ್ಕೆ ಸಮ. ಏನಾದರೂ ದುರಂತ ಇಲ್ಲವೇ ಅವಘಡ ಘಟಿಸಿದಾಗ ಅಂತಹ ಹುಳುಕುಗಳು ಹೊರಗೆ ಬರುತ್ತವೆ. ಇಲ್ಲದೇ ಹೋದರೆ ಯಾವುದೇ ಬಾಧಕ ಇರುವುದಿಲ್ಲ. ಕಳೆದ ವರ್ಷ ಮಂಡ್ಯದಲ್ಲಿ ಬಸ್ಸೊಂದು ನಾಲೆಗೆ ಬಿದ್ದು ಹತ್ತಾರು ಜನರನ್ನು ಬಲಿ ತೆಗೆದುಕೊಂಡಿತು. ಆ ಬಸ್ ತುಂಬಾ ಹಳೆಯದಾಗಿತ್ತು. ಅದಕ್ಕೆ ಫಿಟ್ನೆಸ್ ಪ್ರಮಾಣ ಪತ್ರವೇ ಇರಲಿಲ್ಲ ಎಂಬುದು ಗೊತ್ತಾಗಿದ್ದೇ ದುರಂತ ನಡೆದ ಬಳಿಕ. ಮೊನ್ನೆ ನಡೆದ ದೆಹಲಿ ಅಗ್ನಿದುರಂತವೂ ಇದಕ್ಕೆ ಹೊರತಲ್ಲ. ಕಟ್ಟಡದಲ್ಲಿದ್ದ ಕೆಲವು ತಯಾರಿಕಾ ಘಟಕಗಳು ಅನಧಿಕೃತ, ಕಟ್ಟಡದಲ್ಲಿ ಗಾಳಿ, ಬೆಳಕಿನ ವ್ಯವಸ್ಥೆಯೇ ಇರಲಿಲ್ಲ ಎಂಬುದು ಈಗ ಬೆಳಕಿಗೆ ಬಂದಿದೆ. ಇಂತಹ ದುರಂತಗಳಿಗೆ ಕೊನೆಯೇ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ. ಈ ಸಂದರ್ಭದಲ್ಲಿ ಮೃತರಾದವರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ನೀಡಿ ಸುಮ್ಮನಾಗುವುದು ಬೇಡ. ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳುವುದು ಅಗತ್ಯ. ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ನಿಗಾ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು.