ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರವು ಮಳೆ ಮಾಹಿತಿಗಾಗಿ ಬೆಂಗಳೂರಿನ 10 ಕಡೆ ಮಳೆ ಮಾಪನ ಯಂತ್ರಗಳನ್ನು ಅಳವಡಿಸಲು ಸಿದ್ಧತೆ ನಡೆಸಿರುವುದನ್ನು ತಿಳಿದು (ಪ್ರ.ವಾ., ಏ. 21) ನಗಬೇಕೋ ಅಳಬೇಕೋ ತಿಳಿಯಲಿಲ್ಲ.
ಮಹಾನಗರದಲ್ಲಿ ಕೇವಲ ಹತ್ತು ಕಡೆ ಇಂತಹ ಮಾಪನ ಅಳವಡಿಸುವುದು ಯಾವ ಪುರುಷಾರ್ಥಕ್ಕಾಗಿ? ಸುಸಜ್ಜಿತವಾದ ದೊಡ್ಡ ಖಾಸಗಿ ಸಂಸ್ಥೆಗಳಲ್ಲೇ ಸರಿಯಾಗಿ ಕೆಲಸ ಮಾಡದ ಈ ಮಾಪನಗಳು, ಸಾರ್ವಜನಿಕ ರಸ್ತೆಗಳಲ್ಲಿ, ಅದೂ ಸರ್ಕಾರದ ಉಸ್ತುವಾರಿಯಲ್ಲಿ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಬಲ್ಲವು ಎಂಬುದನ್ನು ಊಹಿಸಬಹುದು.
ಇಂತಹ ಮಾಪನಗಳು ಮತ್ತು ಅವುಗಳ ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುವುದರ ಬದಲು ಅದೇ ದುಡ್ಡಿನಲ್ಲಿ, ಹಿಂದಿನ ಅನುಭವವನ್ನು ಆಧರಿಸಿ ಕೆಲವಾರು ಕಡೆ ಮಳೆ ನೀರಿನ ಸರಾಗ ಹರಿಯುವಿಕೆ ಹಾಗೂ ಒಳಚರಂಡಿ ದುರಸ್ತಿಯ ಬಗ್ಗೆ ಗಮನ ಹರಿಸುವುದು ಒಳ್ಳೆಯದು.