ಮಳೆಗಾಲದ ಆರಂಭದಲ್ಲಿ ಮಣ್ಣಿನ ಸಿದ್ಧತೆಗಾಗಿ ಹಸಿರು ಗೊಬ್ಬರ ಸೇರಿಸುವುದು ವಾಡಿಕೆ. ಮಣ್ಣಿನ ಸಾವಯವ ಕಾರ್ಬನ್ ಹೆಚ್ಚಿಸುವ ನಿಟ್ಟಿನಲ್ಲಿ ದಾಯಂಚಾ, ಸೆಣಬು, ಎಳ್ಳು, ಸಾಸಿವೆ, ಹುರುಳಿಯನ್ನು ಪೂರ್ವ ಮುಂಗಾರಿನಲ್ಲೇ ಬಿತ್ತುತ್ತಾರೆ. ತಿಂಗಳ ನಂತರ ಕಟಾವು ಮಾಡಿ ಮಣ್ಣಿಗೆ ಸೇರಿಸುತ್ತಾರೆ. ಬಿತ್ತನೆ ಬೀಜ ಸೇರಿದಂತೆ ಇಂತಹ ಗೊಬ್ಬರದ ಬೀಜವನ್ನು ರೈತರಿಗೆ ಕೈಗೆಟಕುವ ದರದಲ್ಲಿ ವಿತರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಬೀಜ ನಿಗಮಗಳನ್ನು ಸ್ಥಾಪಿಸಿವೆ. ಆದರೆ ಈ ನಿಗಮಗಳಲ್ಲಿ ರೈತನ ಅವಶ್ಯಕತೆಯ ಬೀಜಗಳು ಸಿಗುವುದು ಅಪರೂಪವೆನ್ನಬೇಕು. ಗೊಬ್ಬರದ ಜಾತಿಯ ಒಂದೇ ಒಂದು ಬೀಜ ಈ ವರ್ಷದ ಮಳೆಗಾಲದ ಆರಂಭದಲ್ಲಿ ದಾಸ್ತಾನಿರಲಿಲ್ಲ. ಸೋಜಿಗದ ಸಂಗತಿಯೆಂದರೆ, ಅಲ್ಲಿನ ಸಿಬ್ಬಂದಿಯೇ ಯಾವ ಖಾಸಗಿ ಅಂಗಡಿಯಲ್ಲಿ ಏನು ದೊರೆಯುತ್ತದೆ ಎಂಬ ಮಾಹಿತಿ ನೀಡುತ್ತಾರೆ.