ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದ ಕೆಲ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುವುದು, ಬಿಡುವಿನ ವೇಳೆಯಲ್ಲಿ ಗಳಿಸಿದ ಹಣದಿಂದ. ಅವರು ಯಾವುದೋ ಅಂಗಡಿಯಲ್ಲೋ ಹೋಟೆಲ್ನಲ್ಲೋ ಸೈಬರ್ ಸೆಂಟರ್ನಲ್ಲೋ ಲಾಯರ್ ಬಳಿಯಲ್ಲೋ ಅರೆಕಾಲಿಕ ಕೆಲಸ ನಿರ್ವಹಿಸಿ ಗಳಿಸಿದ ಹಣವನ್ನು ತಮ್ಮ ಶಿಕ್ಷಣದ ಖರ್ಚಿಗೆ ಬಳಸುತ್ತಾರೆ. ಹಿಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಗತ್ಯವಿರುವ ಕಾಲೇಜು ವಿದ್ಯಾರ್ಥಿಗಳಿಗೆ ‘ಅರ್ನಿಂಗ್ ಆ್ಯಂಡ್ ಲರ್ನಿಂಗ್’ ಎಂಬ ಯೋಜನೆ ಜಾರಿಯಲ್ಲಿತ್ತು. ಸಂಜೆ ಕಾಲೇಜುಗಳಿರುವುದು ಇಂಥ ವಿದ್ಯಾರ್ಥಿಗಳಿಗಾಗಿಯೇ. ಈ ಸೌಲಭ್ಯ ಇಲ್ಲದೇ ಹೋಗಿದ್ದರೆ ಎಷ್ಟೋ ಬಡ ಮಕ್ಕಳ ವಿದ್ಯಾಭ್ಯಾಸ ಪೂರ್ಣ
ವಾಗುತ್ತಿರಲಿಲ್ಲ. ಆದ್ದರಿಂದ ಮನಸ್ಸು ಪಕ್ವವಾಗಿರುವ, ಜವಾಬ್ದಾರಿಯಿರುವ ಕಾಲೇಜು ವಿದ್ಯಾರ್ಥಿಗಳನ್ನು ಹಣ ಗಳಿಕೆ ಪ್ರವೃತ್ತಿಯಿಂದ ಹೊರತರುವ ಅಗತ್ಯವಿಲ್ಲ. ಇನ್ನೂ ಮನಸ್ಸು ಬಲಿಯದ, ಜವಾಬ್ದಾರಿ ಎಂದರೆ ಏನೆಂದು ತಿಳಿಯದ, ಪ್ರೌಢಶಾಲೆ ಅಥವಾ ಅದಕ್ಕಿಂತ ಕೆಳ ಹಂತದ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲೇಖಕರ ಸಲಹೆ ಸೂಕ್ತವಾಗಿದೆ.