ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತಾವು ಅಧಿಕಾರದಲ್ಲಿದ್ದಾಗ ಮಾತ್ರ ಈ ಯೋಜನೆಗಾಗಿ ಯತ್ನಿಸಿದ್ದೇವೆ, ಬೇರೆ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ ಎಂದು ಪರಸ್ಪರ ಆರೋಪಿಸಿಕೊಳ್ಳುತ್ತಿವೆ. ಈ ಯೋಜನೆಯು ರಾಜಕೀಯಕ್ಕಿಂತ ಹೆಚ್ಚಾಗಿ ರಾಜ್ಯದ ಹಿತಾಸಕ್ತಿಯ ಪ್ರಶ್ನೆಯಾಗಿ ಕಾಣಿಸಬೇಕು. ವಾಸ್ತವವಾಗಿ ಈ ಯೋಜನೆಯ ಜಾರಿಗೆ ಈವರೆಗೂ ನಿರ್ಣಾಯಕ ಎಂಬಂತಹ ಪ್ರಯತ್ನವೇ ನಡೆದಿಲ್ಲ. ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಎದುರು ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಹಿತಾಸಕ್ತಿ ರಕ್ಷಣೆಯ ವಿಷಯದಲ್ಲಿ ಸದಾ ಹಿಂದೆ ಬೀಳುತ್ತಾ ಬಂದಿವೆ. ಅಂತಹ ತಪ್ಪು ಮೇಕೆದಾಟು ವಿಷಯದಲ್ಲಿ ಆಗಬಾರದು. ಕೇಂದ್ರದ ಮೇಲೆ ಒಟ್ಟಾಗಿ ಒತ್ತಡ ತರಬೇಕು.