‘ಧರ್ಮದ ಆಧಾರವಿಲ್ಲದೇ ಕಟ್ಟುವ ಯಾವ ಸಾಮ್ರಾಜ್ಯವೂ ನಿಲ್ಲುವುದಿಲ್ಲ ಎಂದು ಮಹರ್ಷಿ ವಾಲ್ಮೀಕಿ ಪ್ರತಿಪಾದಿಸಿದ್ದರು’ ಎಂದು ವಿದ್ವಾಂಸ ಕೆ.ಎಸ್.ನಾರಾಯಣಾಚಾರ್ಯ ಅವರು ತಮ್ಮ ಉಪನ್ಯಾಸದಲ್ಲಿ ಹೇಳಿದ್ದಾರೆ (ಪ್ರ.ವಾ., ನ. 1). ಸರಿಯೇ, ಕಾಲಮಾನಕ್ಕೆ ತಕ್ಕ ಹಾಗೆ ಪರಿಷ್ಕರಿಸಿಕೊಂಡು ಅರ್ಥ ಮಾಡಿಕೊಳ್ಳುವುದಾದರೆ, ಮಹರ್ಷಿ ವಾಲ್ಮೀಕಿಯವರ ನುಡಿ ಇವತ್ತಿಗೂ ಸತ್ಯ. ಈಗ ನಮ್ಮದು ಯಾವುದೋ ರಾಜವಂಶದ ಸಾಮ್ರಾಜ್ಯವಲ್ಲ, ಜನತಂತ್ರ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಮತ್ತು ನಾವು ಈ ಹೊಸ ರಾಷ್ಟ್ರಕ್ಕಾಗಿ ಒಂದು ಹೊಸ ಧರ್ಮವನ್ನು ರೂಪಿಸಿಕೊಂಡಿದ್ದೇವೆ ಎನ್ನುವುದನ್ನೂ ಗಟ್ಟಿಯಾಗಿ ಮನವರಿಕೆ ಮಾಡಿಕೊಳ್ಳಬೇಕು. ನಮ್ಮ ಹೊಸ ಧರ್ಮ ‘ಜನತಂತ್ರ’, ನಮ್ಮ ಹೊಸ ಧರ್ಮಗ್ರಂಥ ಭಾರತೀಯ ಸಂವಿಧಾನ. ಎಲ್ಲರನ್ನೂ ಒಳಗೊಳ್ಳುವ ಈ ಲೌಕಿಕವಾದ, ಮತಧರ್ಮ ನಿರಪೇಕ್ಷ ಸಂವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಜನ ಮತ್ತು ಜನತಂತ್ರ ಉಳಿಯಲು ಸಾಧ್ಯ.