‘ಉತ್ತಮ ರಸ್ತೆಗಳು ಬೇಕು ಎಂದರೆ ಜನ ಹಣ ನೀಡಬೇಕು’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ (ಪ್ರ.ವಾ., ಸೆ. 17). ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾ ದುದು ಸರ್ಕಾರಗಳ ಕರ್ತವ್ಯ. ದೇಶದ ಪ್ರತಿಯೊಬ್ಬ ಪ್ರಜೆಯೂ ಜಿಎಸ್ಟಿ ರೂಪದಲ್ಲಿ ತೆರಿಗೆ ಪಾವತಿಸುತ್ತಿ ದ್ದಾನೆ. ಬಡವ– ಬಲ್ಲಿದ ಎನ್ನದೆ ಪಾವತಿಸುತ್ತಿರುವ ತೆರಿಗೆ ಹಣದಲ್ಲಿ ಮೂಲ ಸೌಕರ್ಯಗಳನ್ನು ಕೊಡದೆ ಸರ್ಕಾರಗಳು ಮಾಡುತ್ತಿರುವ ಅಭಿವೃದ್ಧಿಗಳಾದರೂ ಏನು? ಶ್ರೀಮಂತರು ಆದಾಯ ತೆರಿಗೆ, ಆಸ್ತಿ ತೆರಿಗೆಯಂತಹ ಶುಲ್ಕಗಳನ್ನು ಹೆಚ್ಚುವರಿಯಾಗಿ ಪಾವತಿಸುತ್ತಾರೆ. ವಾಹನಗಳು ಓಡಾಡುವ ಎಲ್ಲ ರಸ್ತೆಗಳಿಗೂ ಟೋಲ್ ಶುಲ್ಕ ವಿಧಿಸುತ್ತಾ ಹೋದರೆ ಜನಸಾಮಾನ್ಯ ಓಡಾಡುವುದಾದರೂ ಹೇಗೆ? ದಿನನಿತ್ಯ ಬಳಸುವ ವಸ್ತುಗಳ ಬೆಲೆ ಹೆಚ್ಚಿಸುತ್ತಾ ರಸ್ತೆಗಳಿಗೆ ಶುಲ್ಕ ವಿಧಿಸುತ್ತಾ ಹೋದರೆ, ಶಪಿಸುತ್ತಲೇ ಅವುಗಳನ್ನು ಬಳಸುವುದು ಜನರಿಗೆ ಅನಿವಾರ್ಯವಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಬಸವಳಿದ ಜನಸಾಮಾನ್ಯನ ಮೇಲೆ ಸರ್ಕಾರ ಇನ್ನೆಷ್ಟು ಬರೆಗಳನ್ನು ಎಳೆಯಲಿದೆಯೋ?