ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜನವರಿ 3ರಂದು ಪ್ರತಿವರ್ಷ ‘ಸಾವಿತ್ರಿ ಉತ್ಸವ’ ಹಮ್ಮಿಕೊಳ್ಳುವ ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ಧಾರ ಸ್ವಾಗತಾರ್ಹ. ಭಾರತದ ಅಂದಿನ ಪರಿಸ್ಥಿತಿ ಹೆಣ್ಣುಮಕ್ಕಳ ವಿಚಾರದಲ್ಲಿ ತುಂಬಾ ಕಠಿಣವಾಗಿತ್ತು. ಮಹಿಳೆಯೊಬ್ಬಳು ಶಿಕ್ಷಕಿ ಆಗುವುದೆಂದರೆ, ಧರ್ಮ ಮತ್ತು ಸಮಾಜಕ್ಕೆ ದ್ರೋಹ ಬಗೆದಂತೆ ಎಂದು ಭಾವಿಸಿದ್ದ ಕಾಲ ಅದು. ಆದರೂ ಯಾವ ಪ್ರತಿರೋಧಕ್ಕೂ ಅಂಜದೆ, ಸ್ತ್ರೀಯರು ಕೂಡ ಪುರುಷರಂತೆ ಸಮಾನವಾದ ರೀತಿಯಲ್ಲಿ ಶಿಕ್ಷಣ ಪಡೆಯಬೇಕೆಂದು ನಂಬಿ, ಮಹಿಳೆಯರ ಶಿಕ್ಷಣಕ್ಕೆ ದಾರಿದೀಪ ಆದವರು ಸಾವಿತ್ರಿಬಾಯಿ.