ಐ.ಎಸ್ ಉಗ್ರರ ರಕ್ತದಾಹದಿಂದ ಮುಕ್ತಿ ಪಡೆದು ಮತ್ತೆ ಸಾಂಸ್ಕೃತಿಕ ಶಕ್ತಿ ಪಡೆಯುತ್ತಿರುವ ಸಿರಿಯಾದ ಸಂಭ್ರಮ ತಿಳಿದು (ಪ್ರ.ವಾ., ಮೇ 13) ‘ಮಾನವೀಯತೆಯ ವೃಕ್ಷ ಚಿಗುರಿತು’ ಎಂದು ಸಂತೋಷವಾಯಿತು. ಧರ್ಮಾಂಧತೆಯ ಭಯೋತ್ಪಾದನೆ ಈ ಭೂಮಿಯಲ್ಲಿ ಉಳಿಯಲು ಸಾಧ್ಯವಿಲ್ಲ.ಅದೇ ರೀತಿ ತಾಲಿಬಾನೀಯರ ಅಟ್ಟಹಾಸವೂ ಕಳೆಗುಂದುತ್ತಿದೆ. ಅಫ್ಗಾನಿಸ್ತಾನದಲ್ಲಿ ಅವರು ನಾಶ ಮಾಡಿದ ಬುದ್ಧನ ವಿಗ್ರಹಗಳು ದುರಸ್ತಿಯ ಕಾಯಕಲ್ಪ ಪಡೆಯುತ್ತಿವೆ, ಬರ್ಲಿನ್ನ ಗೋಡೆ ಕುಸಿದಿದೆ, ಯುಗೊಸ್ಲಾವಿಯಾದಲ್ಲಿ ಶಾಂತಿ ಸ್ಥಾಪನೆಯಾಗಿದೆ, ಶ್ರೀಲಂಕಾದಲ್ಲಿ ಎಲ್ಟಿಟಿಇ ನಾಶವಾಗಿದೆ. ವಿಶ್ವಸಂಸ್ಥೆಯ ಉದ್ದೇಶಗಳಿಗೆ ಸಕಾರಾತ್ಮಕ ಪ್ರತಿಫಲ ದೊರೆಯುತ್ತಿದೆ.
ಆದರೂ ಧರ್ಮಾಂಧತೆ, ಸೇಡು, ಜನಾಂಗಿಯ ಪ್ರತೀಕಾರದ ದುರ್ಘಟನೆಗಳು ಮನುಷ್ಯನ ಪಾಶವೀ ಪ್ರವೃತ್ತಿಯಪ್ರತಿರೂಪಗಳಾಗಿ ಅಲ್ಲಲ್ಲಿ ಘಟಿಸುತ್ತಿರುವುದು ವಿಷಾದನೀಯ. ಮಾನವೀಯತೆ, ಸಹಬಾಳ್ವೆ, ಸಹನೆ-ಸಂಯಮ, ಸಮಾಗಮ ಸಿದ್ಧಾಂತವೇ ಸರ್ವಧರ್ಮಗಳ ಸಾರ. ನಮಗೆ ವಿಘಟಕರು ಬೇಕಾಗಿಲ್ಲ, ಸಂಘಟಕರು (ಬೆಸೆಯುವವರು) ಬೇಕಾಗಿದ್ದಾರೆ.