ಶಾಸಕ ಜಮೀರ್ ಅಹ್ಮದ್ ಅವರು ತಮ್ಮ ಒಡೆತನದ ಅತಿಥಿಗೃಹವನ್ನು ಸಿದ್ದರಾಮಯ್ಯ ಅವರ ರಾಜಕೀಯ ಚಟುವಟಿಕೆಗಳಿಗೆ ಬಿಟ್ಟುಕೊಡುವ ನಿರ್ಧಾರ (ಪ್ರ.ವಾ., ಅ. 12) ವೈಯಕ್ತಿಕವಾದುದು. ಅದಕ್ಕೆ ಯಾರದೂ ಅಭ್ಯಂತರ ಇರಲಾರದು. ಆದರೆ, ಎಚ್.ಡಿ.ಕುಮಾರಸ್ವಾಮಿ ಅವರು ಇದೇ ಅತಿಥಿಗೃಹದಲ್ಲಿ ಇದ್ದದ್ದರಿಂದಲೇ ಅವರಿಗೆ ಅದೃಷ್ಟ ಒಲಿದುಬಂದು ಎರಡು ಬಾರಿ ಮುಖ್ಯಮಂತ್ರಿಯಾದರು ಎಂಬ ತಮ್ಮ ನಂಬಿಕೆಯನ್ನು ಅವರು ಇದಕ್ಕೆ ಆಧಾರವಾಗಿ ನೀಡಿದ್ದು ಸರಿಯಲ್ಲ. ಹಾಗೆಯೇ, ಪ್ರಸ್ತುತ ಶಾಸಕರು ಮಾತ್ರ ಇಂಥ ನಂಬಿಕೆಗೆ ಮೊದಲಿಗರೇನೂ ಅಲ್ಲ. ಇತ್ತೀಚೆಗೆ, ಇಡೀ ಸಮಾಜ ಒಂದಲ್ಲ ಒಂದು ರೀತಿಯ ಕುರುಡು ನಂಬಿಕೆಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಯಾಗುತ್ತಿದೆ ಎನ್ನುವುದೇ ಆತಂಕಕಾರಿ.