ಕನ್ನಡ ನಾಡಿನ ಆರು ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸದಸ್ಯತ್ವ ಹೊಂದಿರುವವರ ಸಂಖ್ಯೆ ಕೇವಲ ಮೂರು ಲಕ್ಷದ ಹತ್ತು ಸಾವಿರದ ಮುನ್ನೂರಿಪ್ಪತ್ತು ಎಂದು ಪರಿಷತ್ ಇತ್ತೀಚೆಗೆ ತಿಳಿಸಿದೆ. ಕರ್ನಾಟಕದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಸದಸ್ಯತ್ವ ಪಡೆದವರ ಸಂಖ್ಯೆ ಅತ್ಯಲ್ಪ. ಇದು ಮಾತೃಭಾಷೆಯ ಬಗೆಗೆ ನಮಗಿರುವ ಕಾಳಜಿಯನ್ನು ತೋರಿಸುತ್ತದೆ. ಶತಮಾನ ದಾಟಿದ, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್, ಆರ್ಥಿಕವಾಗಿ ಇನ್ನೂ ಸದೃಢವಾಗದೇ ಇರಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿದೆ. ಇದರಿಂದ, ಪರಿಷತ್ ನಡೆಸುವ ಯಾವುದೇ ಕಾರ್ಯಚಟುವಟಿಕೆ ಅಥವಾ ಸಮ್ಮೇಳನಗಳ ಖರ್ಚು-ವೆಚ್ಚಕ್ಕೆ ಸರ್ಕಾರದ ಮುಂದೆ ಸದಾ ಕೈಯೊಡ್ಡುವ ಪರಿಸ್ಥಿತಿ ಇದೆ.