ಕನ್ನಡ ನಾಡಿನ ಆರು ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸದಸ್ಯತ್ವ ಹೊಂದಿರುವವರ ಸಂಖ್ಯೆ ಕೇವಲ ಮೂರು ಲಕ್ಷದ ಹತ್ತು ಸಾವಿರದ ಮುನ್ನೂರಿಪ್ಪತ್ತು ಎಂದು ಪರಿಷತ್ ಇತ್ತೀಚೆಗೆ ತಿಳಿಸಿದೆ. ಕರ್ನಾಟಕದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಸದಸ್ಯತ್ವ ಪಡೆದವರ ಸಂಖ್ಯೆ ಅತ್ಯಲ್ಪ. ಇದು ಮಾತೃಭಾಷೆಯ ಬಗೆಗೆ ನಮಗಿರುವ ಕಾಳಜಿಯನ್ನು ತೋರಿಸುತ್ತದೆ. ಶತಮಾನ ದಾಟಿದ, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್, ಆರ್ಥಿಕವಾಗಿ ಇನ್ನೂ ಸದೃಢವಾಗದೇ ಇರಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿದೆ. ಇದರಿಂದ, ಪರಿಷತ್ ನಡೆಸುವ ಯಾವುದೇ ಕಾರ್ಯಚಟುವಟಿಕೆ ಅಥವಾ ಸಮ್ಮೇಳನಗಳ ಖರ್ಚು-ವೆಚ್ಚಕ್ಕೆ ಸರ್ಕಾರದ ಮುಂದೆ ಸದಾ ಕೈಯೊಡ್ಡುವ ಪರಿಸ್ಥಿತಿ ಇದೆ.
ಯಾವುದೇ ಸರ್ಕಾರ ಇರಲಿ ಅದು ತನ್ನ ಮೂಗಿನ ನೇರಕ್ಕೆ ಕಾರ್ಯಕ್ರಮ ಪಟ್ಟಿ ತೋರಿಸಿದರೆ ಮಾತ್ರ ಹಣ ಬಿಡುಗಡೆ ಮಾಡುತ್ತದೆ. ಸ್ವಲ್ಪ ವ್ಯತ್ಯಾಸವಾದರೂ ಅನುದಾನ ತಡೆಹಿಡಿಯುತ್ತದೆ. ಆಗ ದಾನಿಗಳ ನೆರವಿಗೆ ಅತ್ತಿತ್ತ ನೋಡಬೇಕಾ ಗುತ್ತದೆ.ಯಾವುದೇ ಸಂಘಟನೆಯ ಧ್ಯೇಯೋದ್ದೇಶಗಳನ್ನು ಅನುಷ್ಠಾನಗೊಳಿಸುವ ವೇಗ ಆ ಸಂಸ್ಥೆಯ ಆರ್ಥಿಕಸ್ವಾವಲಂಬನೆಯನ್ನು ಅವಲಂಬಿಸಿರುತ್ತದೆ. ನಾಡು, ನುಡಿ, ಜಲದ ವಿಷಯದಲ್ಲಿ ಸದಾ ಒಗ್ಗಟ್ಟಾಗಿ ಭಾಷಾಭಿಮಾನ ಎತ್ತಿ ತೋರಿಸುವ ಹಲವಾರು ಕನ್ನಡಪರ ಸಂಘಟನೆಗಳು ನಮ್ಮಲ್ಲಿವೆ. ಹೀಗೆಯೇ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು ಮತ್ತು ಇವರುಗಳನ್ನು ಒಳಗೊಂಡ ಎಲ್ಲಾ ಸಂಘಟನೆಗಳ ತಾಯಿಬೇರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇರಬೇಕು ಮತ್ತು ಅವರೆಲ್ಲರೂ ಸಾಹಿತ್ಯ ಪರಿಷತ್ತಿನಲ್ಲಿ ಸದಸ್ಯತ್ವ ಹೊಂದಿದ್ದರೆ ಪರಿಷತ್ನ ಗಾಂಭೀರ್ಯ ಹೆಚ್ಚುತ್ತದೆ. ಕೇವಲ ಚುನಾವಣಾ ದೃಷ್ಟಿಕೋನದಿಂದ ಸದಸ್ಯತ್ವ ಸಂಖ್ಯೆಯನ್ನು ನೋಡದೇ ಪರಿಷತ್ ಅನ್ನು ಬಲಪಡಿಸುವ ದಿಸೆಯಲ್ಲಿ ಸದಸ್ಯತ್ವವನ್ನು ಹೆಚ್ಚಿಸಬೇಕಾದ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ.
- ಗಣಪತಿ ನಾಯ್ಕ್, ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.