ಕೊರೊನಾ ವೈರಾಣುವಿನ ಕಾರಣದಿಂದ ಚೀನಾ, ಇಟಲಿ, ಇರಾನ್ ಮತ್ತಿತರ ದೇಶಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜೀವಹಾನಿ ಆಗಿದೆ. ಇದೊಂದು ಮಾನವ ದುರಂತವೂ ಹೌದು. ಈ ಪರಿಣಾಮ ನಮ್ಮ ದೇಶದ ಮೇಲೂ ಆಗಿದೆ.
ಪ್ರಸ್ತುತ, ನಮ್ಮ ರಾಜ್ಯದ, ದಿನದಿನವೂ ದುಡಿದೇ ಬದುಕುವ ಕೂಲಿಕಾರ್ಮಿಕ ವರ್ಗದವರಾದ ಟಾಂಗಾವಾಲಾಗಳು, ಆಟೊ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಕೆಲವಾರು ದಿನಗಳಿಂದ ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಆದಾಯವು ತೀವ್ರವಾಗಿ ಕಡಿತವಾಗಿದೆ ಮತ್ತು ಬದುಕು ದುಸ್ತರವಾಗಿದೆ.
ಇಂಥ ಸಂಕಷ್ಟದ ಸಮಯದಲ್ಲಿ ಸರ್ಕಾರ ಅವರ ನೆರವಿಗೆ ಬರಬೇಕಾದ ಅನಿವಾರ್ಯವಿದೆ. ದವಸಧಾನ್ಯಗಳ ವಿತರಣೆಯ ಜೊತೆಗೆ ಒಂದಷ್ಟು ಪ್ರಮಾಣದ ಹಣದ ವಿಲೇವಾರಿಯೂ ಆಗಬೇಕಿದೆ.
ಇದು ಸಹಮಾನವರ ಬಗ್ಗೆ ತೋರಿಸುವ ಮಾನವ ಕಾಳಜಿಯಲ್ಲದೆ ಬೇರೇನಲ್ಲ. ಆ ಕುರಿತು ನಮ್ಮ ಸರ್ಕಾರದ ವರಿಷ್ಠಮಂದಿ ಸಕಾರಾತ್ಮಕವಾಗಿ ಚಿಂತಿಸಿ, ಕಾರ್ಯೋನ್ಮುಖರಾಗಲಿ ಎಂಬುದು ಮಾನವೀಯತೆಯುಳ್ಳ ಎಲ್ಲರ ಕಳಕಳಿಯೂ ಆಗಿದೆ.