ಮುಖ್ಯಮಂತ್ರಿ ಯಡಿಯೂರಪ್ಪನವರು ಮೊಟ್ಟಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿ ರೈತರಿಗೆ ಅನುಕೂಲವಾಗುವ ಹಲವು ಯೋಜನೆ ಪ್ರಕಟಿಸಿ ರೈತಾಪಿ ವರ್ಗದ ಮನ ಗೆದ್ದಿದ್ದಾರೆ. ಆದರೆ ಅವರೇನೋ ಧರ್ಮಾರ್ಥಕ್ಕೆ ಕೃಷಿ ಬಜೆಟ್ ಮಂಡಿಸಿದವರಂತೆ ಹಾವೇರಿ ಜಿಲ್ಲೆ ನವಮಣ್ಣೂರು ಗ್ರಾಮದಲ್ಲಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದ ರೈತರ ಪರವಾಗಿ 6 ಕೆಜಿ ತೂಕದ ಬೆಳ್ಳಿ ನೇಗಿಲು ಸಮರ್ಪಿಸಿದ್ದಾರೆ.
ಉಪಕಾರ ಸ್ಮರಣೆ, ಅಭಿಮಾನ ಇರಬೇಕಾದುದೇ ಆದರೂ ಈ ರೀತಿಯ ಓಲೈಕೆ ಮಾಡುವವರು ಮತ್ತು ಬೆಲೆ ಬಾಳುವ ಉಡುಗೊರೆಯನ್ನು ತೆಗೆದುಕೊಳ್ಳುವವರು ಇಬ್ಬರಿಗೂ ಶೋಭೆಯಲ್ಲ. ಯಾಕೆಂದರೆ ಇದು ಸಾರ್ವಜನಿಕ ಹಣದ ಯೋಜನೆಯಾದ್ದರಿಂದ ಅವರನ್ನು ಮಾತಿನ ಮೂಲಕ ಅಭಿನಂದಿಸಬಹುದಿತ್ತು.
ಯಡಿಯೂರಪ್ಪನವರಾದರೂ ಅದನ್ನು ನಯವಾಗಿ ನಿರಾಕರಿಸಿ ಇಲ್ಲವೇ ಇಂತಹ ಆಡಂಬರದ ಸನ್ಮಾನಗಳು ಬೇಡವೆಂದು ಸಭೆಯಲ್ಲಿಯೇ ಘೋಷಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಬಹುದಿತ್ತಲ್ಲದೆ ಆ ಮೂಲಕ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಆತ್ಮಸಾಕ್ಷಿಗೆ ಸಂಬಂಧಿಸಿದ ಅಭಿಮಾನ ಅತಿರೇಕವಾದರೆ ಅಪಹಾಸ್ಯಕ್ಕೂ ಈಡಾಗಬಹುದು.