‘ಪ್ರಶಸ್ತಿ ಹಿಂದಿರುಗಿಸುತ್ತಿರುವವರಿಗೆ ತಲೆ ಕೆಟ್ಟಿದೆ’ ಎಂಬ ಹೇಳಿಕೆಯ ಮೂಲಕ (ಪ್ರ.ವಾ., ಅ. 17) ಸಂಶೋಧಕ ಚಿದಾನಂದ ಮೂರ್ತಿ ಅವರು ತಾವೀಗ ಸಾಮಾಜಿಕ ಚಿಂತನೆಯ ಲೇಖಕರಾಗಿ ಉಳಿದಿಲ್ಲ ಎಂಬುದನ್ನು ಮತ್ತೊಮ್ಮೆ ಘೋಷಿಸಿಕೊಂಡಂತಾಗಿದೆ. ಅಲ್ಲೆಲ್ಲೊ ‘... ಮೂತ್ರ ವಿಸರ್ಜನೆ ಮಾಡುತ್ತೇನೆಂದು ಏಕೆ ಹೇಳುವುದಿಲ್ಲ...’ ಎಂದೂ ಅವರು ಕೇಳಿದ್ದಾರೆ. ಇದರಿಂದ ಒಂದು ಧರ್ಮದವರನ್ನು ಕೆಣಕಿದಂತೆ ಆಗುವುದಿಲ್ಲವೇ?
ಕೆಲವರ ಅಕೃತ್ಯಗಳಿಗೆ ಈ ಬಗೆಯ ಉದ್ರೇಕಕಾರಿ ಮಾತುಗಳು ಪರೋಕ್ಷವಾಗಿಯಾದರೂ ಕಾರಣವಾಗುತ್ತವೆ. ಪ್ರಶಸ್ತಿ ವಾಪಸು ಮಾಡುವ ಮಾರ್ಗ ಸರಿಯಲ್ಲ ಎನ್ನುವವರು ಸೂಕ್ತವಾದ ಬೇರೆ ಮಾರ್ಗದಲ್ಲಿ, ವಿವೇಕದ ಮಾತುಗಳಲ್ಲಿ ಪ್ರತಿಕ್ರಿಯಿಸಲಿ. ಅದೂ ಸಾಧ್ಯವಿಲ್ಲದವರು ಯುವಜನರನ್ನು ಕೆರಳಿಸುವ, ಎತ್ತಿಕಟ್ಟುವ ದಾರಿ ಹಿಡಿಯಬಾರದು. ಮಾಧ್ಯಮಗಳಲ್ಲಿ ಬರುತ್ತಿರುವ ಕೆಲವರ ಮಾತು ಓದಿದರೆ ಅವರ ಮನಸ್ಥಿತಿ ಅದೆಷ್ಟು ಕೆಟ್ಟುಹೋಗಿದೆ ಎಂಬುದು ಅರಿವಾಗಿ, ಆತಂಕವಾಗುತ್ತಿದೆ.