ಸುನಂದಾ ಪುಷ್ಕರ್, ರಾಜಕುಮಾರಿ ಡಯಾನಾ, ಮಿನುಗುತಾರೆ ಕಲ್ಪನಾ, ಮಧುಬಾಲಾರಂತಹ ಸೆಲೆಬ್ರಿಟಿಗಳ ದುರಂತ ಅಂತ್ಯಗಳ ಸಾಲಿಗೆ ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಅವರ ಆತ್ಮಹತ್ಯೆ ಸೇರ್ಪಡೆಯಾಗಿರುವುದು ನಿಜಕ್ಕೂ ವಿಷಾದಕರ. ಕಣ್ಣು ಕೋರೈಸುವ ರೂಪಸಿರಿ, ಬೇಕೆನ್ನಿಸುವ ವಸ್ತುಗಳನ್ನು ನಿಮಿಷಗಳಲ್ಲಿ ಕೊಳ್ಳಬಲ್ಲ ಆರ್ಥಿಕ ಸಾಮರ್ಥ್ಯದೊಂದಿಗೆ ಅಗಾಧ ಜನಪ್ರಿಯತೆಯ ಒಡೆಯರಾದ ಈ ಸೆಲೆಬ್ರಿಟಿಗಳಿಗೆ ಏನಾಗಿದೆ?
ಮಧ್ಯಮ ವರ್ಗದ ಮಹಿಳೆಯರಂತೆ ಇವರಿಗೆ ಬೆಲೆ ಏರಿಕೆಯ ಬಿಸಿ ತಟ್ಟದು. ಕಾಡುವ ಸಮಸ್ಯೆಗಳನ್ನು ಮನದಲ್ಲೇ ಅಡಗಿಸಿಕೊಂಡು ಮನೆ, ಕಚೇರಿಗಳಲ್ಲಿ ನಗುಮುಖ ಹೊತ್ತು ಕಾರ್ಯ ನಿರ್ವಹಿಸುವ ಜವಾಬ್ದಾರಿ ಇರದು. ವಿವಾಹವೆಂಬುದು ಬದುಕಿನಲ್ಲಿ ಅತಿ ಮುಖ್ಯ ಘಟ್ಟ, ಮಾತ್ರವಲ್ಲ ಅದೊಂದು ಪಾಠಶಾಲೆ. ಪ್ರೇಮಿಯ ಹಾಗೂ ಆತನ ಕುಟುಂಬದ ಬಗೆಗೆ ವಿವರದ ಕೊರತೆ, ಸಂಗಾತಿಯ ಬಗೆಗೆ ಹಿರಿಯರನ್ನು ಕತ್ತಲಲ್ಲಿರಿಸುವುದು ಸಹ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ.
ತಳಹದಿ ಭದ್ರವಾಗಿರದ ಕಟ್ಟಡ ಕುಸಿಯುವ ಸಂಭವ ಜಾಸ್ತಿ. ವಿವೇಚನೆಯಿಲ್ಲದೆ ತಪ್ಪು ಹೆಜ್ಜೆಯಿರಿಸುವ ಯುವಜನಾಂಗ ಮಾನಸಿಕವಾಗಿ ಕುಗ್ಗುವುದು ಮಾತ್ರವಲ್ಲ, ಬದುಕನ್ನೇ ಕೊನೆಗಾಣಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಿರುವುದು ಆತಂಕಕಾರಿ. ರೂಪ, ಬುದ್ಧಿಮತ್ತೆಯೊಂದಿಗೆ ಮಹಿಳೆಗೆ ಗಟ್ಟಿಯಾದ ವ್ಯಕ್ತಿತ್ವ, ಕಠಿಣ ಸಂದರ್ಭಗಳನ್ನು ಎದುರಿಸಬೇಕಾದ ಜಾಣ್ಮೆಯ ಬಗ್ಗೆ ತಿಳಿವಳಿಕೆ ಅಗತ್ಯ.