ಕಳಂಕರಹಿತರ(!) ಸ್ವಚ್ಛ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೊಂದು ತಮಾಷೆಯ ವಾಕ್ಯವಾಗಿ ಕಂಡು ಬಂದರೆ ಅಚ್ಚರಿಯೇನಿಲ್ಲ. ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ಪಕ್ಷವೊಂದರ ಹಗರಣಗಳು ನಿತ್ಯವೆಂಬಂತೆ ಅಪ್ಪಳಿಸುತ್ತಿರುವ ದಿನಗಳಲ್ಲಿ, ರಸಾತಳ ಮುಟ್ಟಿದ್ದ ಹಿಂದಿನ ಬಿಜೆಪಿ ಸರ್ಕಾರದ ದಿವಾಳಿತನದ ಹೊತ್ತಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರ `ಕೈ' ಪಾಳಯಕ್ಕೆ ಜಯದ ಮಾಲೆ ಹಾಕಿದ.
ಈಗ ಸಿದ್ದರಾಮಯ್ಯನವರ ತಂಡದಲ್ಲಿರುವವರೆಲ್ಲಾ ಕಳಂಕರಹಿತರೆ? ಇದನ್ನು ವ್ಯಾಖ್ಯಾನಿಸುವುದು ಹೇಗೆ? ಚುನಾವಣೆಯನ್ನು ಅವರುಗಳು ಎದುರಿಸಿ ಗೆದ್ದು ಬಂದ ರೀತಿಯಲ್ಲೆ? ಚುನಾವಣಾ ಆಯೋಗ ನಿಗದಿಪಡಿಸಿದ ಹಣಕ್ಕಿಂತ ಒಂದು ರೂಪಾಯಿಯನ್ನು ಜಾಸ್ತಿ ಖರ್ಚು ಮಾಡದೆ ಗೆದ್ದು ಬಂದವರೆಷ್ಟು ಜನ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಬಹಿರಂಗ ಪಡಿಸಲಿದೆಯೆ?
ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಒಂದರಿಂದ ಹತ್ತರವರೆಗಿನ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲೇ ಕಲಿಯುವಂತೆ ಕ್ರಮ ಕೈಗೊಳ್ಳಬೇಕು. ಯುವಜನ ಕೃಷಿಯಲ್ಲಿ ತೊಡಗಲು ಪ್ರೋತ್ಸಾಹದಾಯಕ ಯೋಜನೆ ಹಮ್ಮಿಕೊಳ್ಳಬೇಕಿದೆ. ಆಹಾರ ಬೆಳೆಯುವ ರೈತನನ್ನು ಈ ಸರ್ಕಾರ ರಕ್ಷಿಸಬೇಕಾದ ತುರ್ತಿದೆ. ಇದೆಲ್ಲಾ ಈ ಸರ್ಕಾರದ ಅರಿವಿನಲ್ಲಿದೆ ಎಂಬ ನಂಬಿಕೆ ಈ ಬಡ ಮತದಾರನದು. -ಚಂದ್ರಶೇಖರ್ ಎನ್. ಸಿರಿವಂತೆ .
ಸೂಚನೆ
`ಪ್ರಜಾವಾಣಿ' ಅಭಿಮತ ಪುಟದ ವಾಚಕರ ವಾಣಿ ಅಂಕಣಕ್ಕೆ ಬರೆಯುವ ಪತ್ರಗಳು 100 ಪದಗಳ ಮಿತಿಯಲ್ಲಿರಲಿ.
ವಿಳಾಸ: ಸಂಪಾದಕರು, ಪ್ರಜಾವಾಣಿ, ವಾಚಕರ ವಾಣಿ ವಿಭಾಗ, 75, ಎಂ.ಜಿ.ರಸ್ತೆ, ಬೆಂಗಳೂರು-560 001