ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಶತಮಾನದ ಸಂಭ್ರಮ. ಇದರ ಇತಿಹಾಸ ಬಲ್ಲವರಿಗೆ ಮೈಸೂರು ಮಹಾರಾಜರ ದೂರದೃಷ್ಟಿ ನೆನಪಾಗುತ್ತದೆ. ದೇಣಿಗೆಯಿಂದ ನಿರ್ಮಿಸಿದ ಈ ಕಟ್ಟಡ ನಾಡಿನ ಅನೇಕ ಪ್ರತಿಭೆಗಳಿಗೆ ಅಧ್ಯಯನ ನೆಲೆಯೂ ಹೌದು. ಇಲ್ಲಿನ ಅಮೂಲ್ಯ ಗ್ರಂಥಗಳ ಅಧ್ಯಯನದ ಫಲವಾಗಿ ವಿಶ್ವದ ಎಲ್ಲ ಕಡೆಗಳಲ್ಲಿ ಹರಡಿದ ಓದುಗರು ಇಂದಿಗೂ ಈ ಗ್ರಂಥಾಲಯವನ್ನು ಸ್ಮರಿಸುತ್ತಾರೆ.
ನಮ್ಮ ಹಿರಿಯರು ಪ್ರಾರಂಭಿಸಿದ ಬೆಂಗಳೂರಿನ ಅನೇಕ ಗ್ರಂಥಾಲಯಗಳಿಗೆ ಇತ್ತೀಚೆಗೆ ದಿನಪತ್ರಿಕೆಗಳು ಸರಬರಾಜಾಗುತ್ತಿಲ್ಲ. ಹಣದ ಕೊರತೆಯಿಂದ ಸರಬರಾಜು ಸ್ಥಗಿತಗೊಂಡಿದೆ ಎಂದು ‘ಪ್ರಜಾವಾಣಿ’ ಸಹಿತ ಅನೇಕ ದಿನಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಪ್ರಜ್ಞಾವಂತ ಓದುಗರು ಚಕಾರವೆತ್ತಿಲ್ಲ ಎಂಬುದು ವಿಷಾದದ ಸಂಗತಿ. ನಾಡಿನ ಪ್ರಜ್ಞಾವಂತರು ಮತ್ತು ಆಡಳಿತಶಾಹಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ.
ಶತಮಾನದ ಸಂಭ್ರಮದಲ್ಲಿರುವ ಈ ಗ್ರಂಥಾಲಯದ ಸವಿನೆನಪಿಗಾಗಿ ಗ್ರಾಮೀಣ ಗ್ರಂಥಾಲಯಗಳ ಬಲವರ್ಧನೆಗೆ ಸರ್ಕಾರ ಕಾಲಮಿತಿ ಕಾರ್ಯಯೋಜನೆ ಹಾಕಿಕೊಳ್ಳಬೇಕಾಗಿದೆ. ಕುವೆಂಪು ಅವರು ವಿದ್ಯಾರ್ಥಿ ದೆಸೆಯಲ್ಲಿ ಮೈಸೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ತಾವು ಮೊದಲು ಓದಿದ ರಾಮಕೃಷ್ಣ ಪರಮಹಂಸರ ಕೃತಿಯಿಂದ ತಮ್ಮ ಜೀವನದಲ್ಲಿ ಆದ ತಿರುವನ್ನು ‘ನೆನಪಿನ ದೋಣಿ’ಯಲ್ಲಿ ಪ್ರಸ್ತಾಪಿಸಿದ್ದಾರೆ. ನಾವೆಲ್ಲರೂ ಓದಿನ ನಿರಂತರತೆಯನ್ನು ಬೆಳೆಸಿಕೊಳ್ಳದಿದ್ದರೆ, ಕ್ಷೋಭೆಗಳನ್ನು ಬೆಳೆಸಿಕೊಳ್ಳುವ ಮನಸ್ಸುಗಳಿಂದ ದೂರವಿರಲು ಸಾಧ್ಯವಿಲ್ಲವೆಂದು ತಿಳಿಯಬೇಕು.
ಈ ಕೇಂದ್ರ ಗ್ರಂಥಾಲಯದ ರಜತ ಮಹೋತ್ಸವ (1939) ಸಂದರ್ಭದಲ್ಲಿ ಅಂದಿನ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಡ್ಡಾಯ ಶಿಕ್ಷಣ ನೀತಿ ಹಾಗೂ ಪ್ರತಿ ಶಾಲೆಯಲ್ಲೂ ಸುಸಜ್ಜಿತ ಗ್ರಂಥಾಲಯ ಇರಬೇಕಾದುದು ಎಷ್ಟು ಅಗತ್ಯ ಎಂಬುದನ್ನು ಪ್ರಸ್ತಾಪಿಸಿದ್ದರು. ಅವರ ಮಾತು ಎಷ್ಟು ಪ್ರಸ್ತುತ ಎಂದು ಇಂದು ನಾವು ಯೋಚಿಸಬೇಕಾಗಿದೆ.