‘ಅನಂತಮೂರ್ತಿ ಯಾರು ಎಂದ ರಾಜ್ಯಪಾಲ’ ಎಂಬ ಶೀರ್ಷಿಕೆಯಡಿ (ಪ್ರ.ವಾ. ಜ.31) ಪ್ರಕಟವಾದ ಸುದ್ದಿ ಕುರಿತು ನನ್ನ ಪ್ರತಿಕ್ರಿಯೆ. ‘ಅನಂತಮೂರ್ತಿ ಯಾರು? ಅವರೊಬ್ಬ ರೋಗಿ. ಡಯಾಲಿಸಿಸ್ಗೆ ಒಳಗಾಗುತ್ತಿರುವ ವ್ಯಕ್ತಿಯೊಂದಿಗೆ ನಾನು ವಾದ ಮಾಡುವ ಅವಶ್ಯಕತೆ ಇಲ್ಲ. ಅವರು ರಾಜ್ಯಪಾಲರ ಪರಮಾಧಿಕಾರವನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೌಹಾರಿದ್ದಾರೆ.
ಇಲ್ಲಿ ರಾಜ್ಯಪಾಲರು, ಕುಲಪತಿ ಸ್ಥಾನಕ್ಕೆ ಆಯ್ಕೆ ಮಾಡಿರುವ ಕ್ರಮದ ಬಗ್ಗೆ ನಾನು ಪ್ರತಿಕ್ರಿಯಿಸುತ್ತಿಲ್ಲ. ಬಹುಶಃ ಅವರ ಆಯ್ಕೆಯೇ ಅಂತಿಮ ಇರಬಹುದು. ಆದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕರಾಗಿರುವ ಅನಂತಮೂರ್ತಿ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿರುವುದು ರಾಜ್ಯಪಾಲರ ಘನತೆಗೆ ತಕ್ಕುದಲ್ಲ.
ಬದುಕಿನ ಮುಸ್ಸಂಜೆಯಲ್ಲಿ ವಯೋಸಹಜವಾದ ರೋಗ–ರುಜಿನಗಳು ಮನುಷ್ಯನನ್ನು ಕಾಡುವುದು ಅತ್ಯಂತ ಸಾಮಾನ್ಯ ಸಂಗತಿ. ಯಾರೂ ಇದರಿಂದ ಹೊರತಲ್ಲ. ಡಯಾಲಿಸಿಸ್ಗೆ ಒಳಗಾಗಿರುವ ಕಾರಣಕ್ಕೆ ಅನಂತಮೂರ್ತಿಯವರ ವ್ಯಕ್ತಿತ್ವಕ್ಕಾಗಲಿ, ಅವರ ಮನಸ್ಥಿತಿಗಾಗಲಿ ಮುಕ್ಕಾಗುವುದು ಸಾಧ್ಯವಿಲ್ಲ.
ಇಂದಿನ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಗಂಭೀರ ರೋಗಗಳಿಗೆ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಚಟುವಟಿಕೆಯಿಂದ ಬದುಕುವುದು ಸಾಧ್ಯವಾಗಿರುವಾಗ, ಡಯಾಲಿಸಿಸ್ಗೆ ಒಳಗಾಗಿರುವುದೇ ಕುಂದು ಎಂಬಂತೆ ರಾಜ್ಯಪಾಲರು ಕ್ಷುಲ್ಲಕವಾಗಿ ಮಾತನಾಡಿರುವುದು, ಅವರ ಸ್ಥಾನಕ್ಕೆ ಯೋಗ್ಯವಾದುದಲ್ಲ. ಇದು ಡಯಾಲಿಸಿಸ್ಗೆ ಒಳಗಾಗಿರುವ ಅಸಂಖ್ಯಾತ ರೋಗಿಗಳ ಆತ್ಮಸ್ಥೈರ್ಯವನ್ನು ಕುಂದಿಸುವಂಥದು.
ಇನ್ನು ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೂ ರಾಜ್ಯಪಾಲರು ವಾಕ್ಪ್ರಹಾರ ಮಾಡಿರುವುದು ಅನುಚಿತವಾದುದು. ಪ್ರಜಾಪ್ರಭುತ್ವದಲ್ಲಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವವರನ್ನೂ ಪ್ರಶ್ನಿಸುವ ಹಕ್ಕು ಒಬ್ಬ ಸಾಮಾನ್ಯ ಪ್ರಜೆಗೆ ಇದೆ. ರಾಜ್ಯಪಾಲರು ಹೇಗೆತಾನೆ ಪ್ರಶ್ನಾತೀತ ಪರಮಾಧಿಕಾರ ಉಳ್ಳವರಾಗುತ್ತಾರೆ?