‘ರಾಘವೇಶ್ವರರ ವಿರುದ್ಧ ಹುನ್ನಾರ’ ವರದಿಗೆ ನನ್ನ ಪ್ರತಿಕ್ರಿಯೆ (ಪ್ರ.ವಾ. ಅ.13). ‘ಸಮಾಜದಲ್ಲಿ ದೊಡ್ಡ ಸ್ಥಾನ ಮತ್ತು ಅಧಿಕಾರ ಹೊಂದಿರುವವರ ವಿರುದ್ಧ ಆರೋಪ ಮಾಡುವುದು ಇತ್ತೀಚೆಗೆ ಒಂದು ಚಟವಾಗಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳ ಮೇಲೆ ಬಂದಿರುವ ಅತ್ಯಾಚಾರದ ಆರೋಪದ ಹಿಂದೆ ಹುನ್ನಾರ ನಡೆದಿರುವ ಸಾಧ್ಯತೆ ಇದೆ’ ಎಂದು ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿಯವರು ಹೇಳಿರುವುದಾಗಿ ವರದಿಯಾಗಿದೆ.
ಅಧಿಕಾರಶಾಹಿ ವಿರುದ್ಧ ಸಾಮಾನ್ಯರಿಗೆ, ಅದರಲ್ಲೂ ಮಹಿಳೆಯರಿಗೆ, ನ್ಯಾಯ ಸಿಗುವುದೇ ದುರ್ಲಭವಾಗಿರುವ ಇಂದಿನ ದಿನಗಳಲ್ಲಿ, ಯಾವುದೋ ಒಂದೆರಡು ನಿದರ್ಶನಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವತ್ರಿಕವೆಂಬಂತೆ, ಒಬ್ಬ ಹಿರಿಯ ವಕೀಲರಾಗಿ ಪ್ರಮೀಳಾ ನೇಸರ್ಗಿಯವರು ಹೀಗೆ ಹೇಳಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ವಿಚಾರಣೆ ನಡೆದು ಸ್ವಾಮಿಗಳು ಆರೋಪದಿಂದ ಮುಕ್ತರಾಗುತ್ತಾರೆಂಬ ನಂಬಿಕೆಯನ್ನು ಪ್ರಮೀಳಾ ನೇಸರ್ಗಿಯವರೂ ಸೇರಿದಂತೆ ಯಾರು ಬೇಕಾದರೂ ಇಟ್ಟುಕೊಳ್ಳಲು ಸ್ವತಂತ್ರರು.
ಆದರೆ ವಿಚಾರಣೆಗೆ ಮುನ್ನವೇ ಸ್ವಾಮಿಗಳನ್ನು ನಿರ್ದೋಷಿಗಳೆಂಬಂತೆ ಬಿಂಬಿಸುವುದು, ಕಾನೂನನ್ನು ಪ್ರತಿಪಾದಿಸುವ ಹಿರಿಯ ವಕೀಲರಾದ ನೇಸರ್ಗಿಯವರಿಗೆ ಅನುಚಿತವಾದುದಲ್ಲವೇ? ಬಹುಶಃ ಈ ಹೇಳಿಕೆ ಅವರ ಮೇಲಿಟ್ಟಿರುವ ಅತಿಯಾದ ‘ಸ್ವಾಮಿನಿಷ್ಠೆ’ಯ ಪ್ರತೀಕವೋ?