ತೆಂಗಿನ ಮರದಿಂದ ನೀರಾ ಇಳಿಸಲು ಅನುವಾಗಿಸುವಂತೆ ಅಬಕಾರಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಬೇಕು (ಪ್ರ.ವಾ., ಸೆ. 3) ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.
ತೆಂಗಿನಕಾಯಿ ಬೆಲೆ ಈಗ ರೂ. 25ರಿಂದ ರೂ. 30ಕ್ಕೆ ಏರಿದೆ. ಹೀಗಿರುವಾಗ ನೀರಾಗೆ ಅನುಮತಿ ನೀಡಿದರೆ ತೆಂಗಿಗೆ ಬರ ಬರಲಿದೆ. ಆದ್ದರಿಂದ ನಿರ್ಧಾರ ಕೈಗೊಳ್ಳುವ ಮುನ್ನ ಸಾಧಕ–ಬಾಧಕಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸುವುದು ಒಳ್ಳೆಯದು. ಗುಜರಾತ್ನಲ್ಲಿ ಈಗಾಗಲೇ ಪಾನನಿರೋಧ ಜಾರಿಯಲ್ಲಿದೆ. ಕೇರಳದಲ್ಲೂ ಮುಂದಿನ 10 ವರ್ಷಗಳಲ್ಲಿ ಹಂತ ಹಂತವಾಗಿ ಪಾನನಿರೋಧ ಜಾರಿಗೆ ತರಲು ನಿರ್ಧರಿಸಲಾಗಿದೆ.
ನೀರಾದಲ್ಲಿ ಮದ್ಯಸಾರ ಅಂಶ ಇರುತ್ತದೆ ಎಂಬ ಅಭಿಪ್ರಾಯ ಎಲ್ಲೆಡೆ ಇದೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಅದರಲ್ಲಿ ಔಷಧ ಗುಣವೂ ಇದೆ. ಈ ಗುಣಾವಗುಣಗಳು ಹೇಗಾದರೂ ಇರಲಿ, ಕಾಳಸಂತೆಕೋರರು ಅದರಲ್ಲಿ ಮದ್ಯಸಾರ ಬೆರೆಸಿ ಲಾಭಕೋರತನಕ್ಕೆ ಇಳಿಯುವುದರಲ್ಲಿ ಸಂಶಯವೇ ಇಲ್ಲ.
ಅಬಕಾರಿಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಇದೆ. ಅಂತೆಯೇ ಸಾವಿರಾರು ಕುಟುಂಬಗಳು ಈ ಮದ್ಯದಿಂದಲೇ ಬೀದಿಪಾಲಾಗುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ಪಾನ ನಿರೋಧದ ಸಾಧ್ಯತೆಗಳ ಬಗ್ಗೆ ನಮ್ಮ ಸರ್ಕಾರವೂ ಯೋಚಿಸಲಿ.