ಕೇಂದ್ರದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಪಾಲ್ಗೊಳ್ಳದೆ ಇರುವುದನ್ನು ‘ಮಹಾಪ್ರಮಾದ’ (ಪ್ರ.ವಾ.ಸಂಪಾದಕೀಯ, ಮೇ 27) ಎಂದು ಪರಿಗಣಿಸುವುದು ಸೂಕ್ತವಲ್ಲ.
ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಸಮಾನ ನೆಲೆಯದ್ದು. ಕೇಂದ್ರದಿಂದ ಸಂವಿಧಾನಬದ್ಧ ಅನುದಾನ ಮತ್ತು ಇತರ ಸೌಲಭ್ಯಗಳನ್ನು ಪಡೆಯುವುದು ಪ್ರತಿ ರಾಜ್ಯದ ಹಕ್ಕು. ಸೌಜನ್ಯದ ದೃಷ್ಟಿಯಿಂದ ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸದಿರುವುದನ್ನು ಪ್ರಶ್ನಿಸಬಹುದು. ಆದರೆ ಕೇಂದ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರನ್ನು ಮೆಚ್ಚಿಸಿ ಹೆಚ್ಚಿನ ಅನುದಾನ ನಿರೀಕ್ಷಿಸುವುದು ಸರಿಯಾದುದಲ್ಲ. ಇದು ಭೂಮಾಲೀಕ ಮತ್ತು ಗೇಣಿದಾರರ ನಡುವಣ ಸಂಬಂಧವನ್ನು ನೆನಪಿಸುತ್ತದೆ. ಇದು ಯಾವ ರಾಜ್ಯದ ಘನತೆಗೂ ತಕ್ಕುದಾದ ನಡವಳಿಕೆಯಲ್ಲ.
ಹಾಗೆಂದೇ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಪೂರ್ವನಿರ್ಧರಿತ ಕಾರ್ಯಕ್ರಮಗಳತ್ತಲೇ ಗಮನಕೊಟ್ಟು ಈ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಈ ಹಿಂದೆ ಸ್ವತಃ ನರೇಂದ್ರ ಮೋದಿಯವರೇ ಕೇಂದ್ರದ ಇಂತಹ ಕಾರ್ಯಕ್ರಮಗಳಿಗೆ ಗೈರುಹಾಜರಾದ ಉದಾಹರಣೆಗಳಿವೆ. ಹೀಗಾಗಿ ಸಿದ್ದರಾಮಯ್ಯ ಕೇಂದ್ರದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸದೇ ಇರುವುದನ್ನು ಪ್ರಮಾದವೆಂದು ಪರಿಗಣಿಸಬೇಕಿಲ್ಲ.