ಬೃಹತ್ ಬೆಂಗಳೂರಿನಲ್ಲಿ ವಿವಿಧ ನಮೂನೆಯ ವಾಹನಗಳ ಸಂಖ್ಯೆ ಹೆಚ್ಚಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಆನಂದ ರಾವ್ ಸರ್ಕಲ್, ಮೈಸೂರು ರಸ್ತೆ ಹಾಗೂ ಇನ್ನಿತರ ಕಡೆ ಮೇಲ್ಸೇತುವೆಗಳನ್ನು ಬಿಬಿಎಂಪಿ ನಿರ್ಮಿಸಿದೆ. ಸೇತುವೆಗೆ ಆಧಾರವಾಗಿ ಕಂಬಗಳನ್ನು ಕಟ್ಟಲಾಗಿದೆ. ಸದರಿ ಕಂಬಗಳ ಸುತ್ತಲೂ ಅಸಂಬದ್ಧವಾದ ರೀತಿಯಲ್ಲಿ ಜಾಹೀರಾತು ಅಂಟಿಸಿ ಅಸಹ್ಯವಾದ ವಾತಾವರಣವನ್ನುಂಟು ಮಾಡಲಾಗಿತ್ತು.
ಈ ಕುರಿತು ‘ಪ್ರಜಾವಾಣಿ’ ಪತ್ರಿಕೆಯ ಕುಂದುಕೊರತೆಗಳ ಅಂಕಣದಲ್ಲಿ ಅಂದಗೆಟ್ಟ ಕಂಬದ ಚಿತ್ರದೊಂದಿಗೆ ಪತ್ರ ಬರೆದು ಜಾಹೀರಾತು ತೆಗೆದು ಹಾಕಲು ಕೋರಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಮಹಾನಗರಪಾಲಿಕೆ ಆನಂದರಾವ್ ಸರ್ಕಲ್ನ ವರ್ತುಲದಿಂದ ರೇಸ್ಕೋರ್ಸ್ ರಸ್ತೆಯ ಗಾಂಧೀಜಿ ಪ್ರತಿಮೆಯವರೆಗಿನ ಮೇಲ್ಸೇತುವೆಯ ಆಧಾರ ಕಂಬಗಳಿಗೆ ಅಂಟಿಸಿದ ಅಸಹ್ಯಕರವಾದ ಜಾಹೀರಾತುಗಳನ್ನು ತೆಗೆದುಹಾಕಿ ಕಂಬಗಳಿಗೆ ಬಣ್ಣ ಹಚ್ಚಿ ಅಂದವಾಗಿಸಿದೆ.
ಇದೇ ಪ್ರಕಾರ ಉಳಿದ ಮೇಲ್ಸೇತುವೆಯಾಧಾರ ಕಂಬಗಳನ್ನು ಸ್ವಚ್ಛವಾಗಿಸಿ ಅಂದವಾಗಿಸಲು ಕ್ರಮ ಜರುಗಿಸಲು ಈ ಮೂಲಕ ಕೋರುತ್ತೇನೆ. ಹಾಗೆಯೇ ಆನಂದರಾವ್ ವೃತ್ತದ ವರ್ತುಲದಿಂದ ಸಂಗೊಳ್ಳಿರಾಯಣ್ಣ ವರ್ತುಲದ ಭಾಗದ ಮೇಲ್ಸೇತುವೆಯ ಕೆಳಭಾಗದಲ್ಲಿರುವ 30 ಅಡಿ ಅಗಲದ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡುವ ಮೂಲಕ ವಾಹನಗಳ ಸುಸೂತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕೋರುತ್ತೇನೆ.