ಮಳೆಗಾಲ ಶುರುವಾಗಿದೆ. ಆದರೆ ಮುಂಗಾರಿನ ಅಬ್ಬರಕ್ಕೆ ಅವಘಡಗಳು ಸಂಭವಿಸದಂತೆ ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬಹುಪಾಲು ನಗರಗಳ ರಾಜಕಾಲುವೆ, -ಮುಖ್ಯ ಕಾಲುವೆಗಳು ಒತ್ತುವರಿಯಾಗಿದ್ದು, ಕೆಲವೇ ನಿಮಿಷದ ಮಳೆ ಕೂಡ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಮಹಾಪೂರದ ಭೀತಿ ಮೂಡಿಸುತ್ತಿದೆ. ಕಟ್ಟಿಕೊಂಡಿರುವ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಕಾಲುವೆಗಳ ದುರಸ್ತಿ ಮಾಡಿಸುವ ಮೂಲಕ ಇದರ ತೀವ್ರತೆ ತಗ್ಗಿಸಲು ಸಾಧ್ಯ.
ಮಳೆ ನೀರಿನೊಂದಿಗೆ ಚರಂಡಿ ನೀರು, ಕಾರ್ಖಾನೆಗಳ ತ್ಯಾಜ್ಯ ಜಲಮೂಲಗಳನ್ನು ಸೇರುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಕುಡಿಯುವ ನೀರು ಸಂಗ್ರಹಾಗಾರಗಳಲ್ಲಿ ಕ್ಲೊರಿನೀಕರಣದೊಂದಿಗೆ ವ್ಯವಸ್ಥಿತ ರೀತಿಯಲ್ಲಿ ನೀರಿನ ಶುದ್ಧೀಕರಣವಾಗಬೇಕು.
ಸೊಳ್ಳೆ-ನೊಣಗಳ ನಿವಾರಣೆಗೆ ಕ್ರಮ ಜರುಗಿಸಬೇಕು. ಸಂತೆ-ಜಾತ್ರೆಗಳು ನಡೆಯುವ ಸ್ಥಳಗಳಲ್ಲಿ ಮಾರುವ ತಿಂಡಿ,- ಪಾನೀಯಗಳ ಗುಣಮಟ್ಟದ ಮೇಲೆ ನಿಗಾ ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು.
–ಡಾ.ಸಮೀರ ಎಲ್.ಹಾದಿಮನಿ
ಆಲಮೇಲ (ಸಿಂದಗಿ)