‘ಪೂಜೆಗೆ ಅರ್ಹರಲ್ಲದ ಶಿರಡಿ ಸಾಯಿಬಾಬಾರನ್ನು ಪೂಜೆ ಮಾಡುತ್ತಿರುವ ಕಾರಣಕ್ಕಾಗಿಯೇ ಮಹಾರಾಷ್ಟ್ರ ಬರದ ಪರಿಸ್ಥಿತಿ ಎದುರಿಸುತ್ತಿದೆ’ ಎಂಬ ಶಂಕರಾಚಾರ್ಯ ಸ್ವರೂಪಾನಾಂದ ಸರಸ್ವತಿ ಸ್ವಾಮೀಜಿ ಅವರ ಹೇಳಿಕೆ ಬೇಸರ ಮೂಡಿಸುತ್ತದೆ.
ರಾಜಕಾರಣಿಗಳು ಮಾತ್ರವಲ್ಲ, ಧಾರ್ಮಿಕ ಮುಖಂಡರೂ ಇಂತಹ ಹೇಳಿಕೆಗಳನ್ನು ನೀಡುವುದು ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಟೀಕೆ, ವಿಮರ್ಶೆಗಳು ಆರೋಗ್ಯಕರವಾಗಿರಬೇಕೇ ಹೊರತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಿರಬಾರದು.
ಶನಿ ಶಿಂಗ್ಣಾಪುರ ದೇವಾಲಯದಲ್ಲಿ ಮಹಿಳೆಯರು ಪೂಜೆ ಮಾಡಲು ಪ್ರಾರಂಭಿಸುವುದರಿಂದ ಅವರ ಮೇಲೆ ಅತ್ಯಾಚಾರ ಹೆಚ್ಚಾಗುತ್ತದೆ ಎಂಬ ಅವರ ಹೇಳಿಕೆಯೂ ಅಸಂಗತ. ಮಹಿಳೆಯರು ಕಾನೂನಿನ ರಕ್ಷಣೆಯೊಂದಿಗೆ ದೇವಾಲಯ ಪ್ರವೇಶ ಮಾಡಿದ ವಿಷಯ ಅರಿತ ನಂತರವೂ ಸ್ವಾಮೀಜಿ ಹೀಗೆ ಹೇಳುವುದು ಎಷ್ಟು ಸರಿ? ಮಹಿಳೆಯರ ಮೇಲೆ ಅತ್ಯಾಚಾರ ಯುಗಗಳಿಂದಲೂ ನಡೆಯುತ್ತಲೇ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದು ನಿಜವಾದರೂ ಅನ್ಯರ ಭಾವ, ಭಕ್ತಿಯನ್ನು ಗೌರವಿಸಿದಾಗ ಮಾತ್ರ ನುಡಿಗಳು ಮುತ್ತಿನ ಹಾರವಾಗಲು ಸಾಧ್ಯ.