ಶಿಕ್ಷಕರು ಬೈದರೆಂದು ನೆಪ ಹೇಳಿ, ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರಿನಲ್ಲಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು. ‘ಆ ಶಿಕ್ಷಕಿಯರಿಗೆ ಶಿಕ್ಷೆ ಕೊಡಿ, ಶಾಲೆಯನ್ನು ಮುಚ್ಚಿಸಿ’ ಎಂದು ದುಃಖತಪ್ತ ತಂದೆ–ತಾಯಿಗಳು ಮತ್ತು ಇತರರು ಶಾಲೆಯ ಮುಂದೆ ಬಾಲಕಿಯರ ಶವವಿಟ್ಟು ಪ್ರತಿಭಟನೆ ಮಾಡಿದರು. ‘ಪರೀಕ್ಷಾ ಸಮಯದಲ್ಲಿ ಹೋಳಿ ಆಡಿ ಸಮಯ ವ್ಯರ್ಥ ಮಾಡಬೇಡಿ’ ಎಂದಷ್ಟೇ ನಾವು ಹೇಳಿದ್ದು ಎಂದು ಶಾಲೆಯ ಆಡಳಿತದವರು ಹೇಳಿದ್ದಾರೆ.
ಈ ಪ್ರಕರಣ ಇತ್ತೀಚೆಗೆ ಮಕ್ಕಳಲ್ಲಿ ಬೆಳೆಯುತ್ತಿರುವ ಆತ್ಮಹತ್ಯಾ ಪ್ರವೃತ್ತಿಯ ಉದಾಹರಣೆ. ಈ ಪ್ರವೃತ್ತಿಗೆ ಕಾರಣಾಂಶಗಳನ್ನು ಜನ ಚಿಂತಿಸಬೇಕು ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು. ತಂದೆ ತಾಯಿ–ಪಾಲಕರ ಲಾಲನಾ–ಪಾಲನಾ ಕ್ರಮ, ತಾವು ಬಯಸಿದ್ದೆಲ್ಲ ಸಿಗಬೇಕು. ಸಿಗದೇ ನಿರಾಶೆಯಾದಾಗ ಏನು ಮಾಡಬೇಕು.
ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಧೋರಣೆ ಅಲ್ಲೇ ಹುಟ್ಟುತ್ತದೆ. ವಿದ್ಯಾರ್ಥಿ ಜೀವನದ ಶಿಸ್ತನ್ನು ಪಾಲಿಸಲು, ಅಮಾನವೀಯತೆಯಿಂದ ವರ್ತಿಸುವ ಶಾಲಾ ವ್ಯವಸ್ಥೆ, ವಿಪರೀತ ಸ್ಪರ್ಧೆ–ಪರೀಕ್ಷಾ ನಿರ್ವಹಣೆಯೇ ಯೋಗ್ಯತೆಗೆ ಮಾಪನ ಎಂದು ಹೇಳುವ ವ್ಯವಸ್ಥೆ, ಆತ್ಮಹತ್ಯಾ ಪ್ರಕರಣಗಳನ್ನು ವೈಭವೀಕರಿಸಿ, ಎಲ್ಲರಿಗೂ ಉಣ ಬಡಿಸುವ ಟಿ.ವಿ, ಪತ್ರಿಕಾ ಮಾಧ್ಯಮಗಳು ಎಲ್ಲರೂ ಇದಕ್ಕೆ ಕಾರಣ.
ಮಕ್ಕಳಲ್ಲಿ ಭಾವನಾತ್ಮಕ ದೃಢತೆಯನ್ನು, ಜೀವನ ಪ್ರೀತಿಯನ್ನು, ಕಲಿಕೆ–ವಿದ್ಯಾಭ್ಯಾಸದ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯವನ್ನು, ನಿರಾಶೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಮನೋಬಲವನ್ನು
ಪಾಲಕರು, ಶಿಕ್ಷಕರು, ಮಾಧ್ಯಮದವರು ಹಾಗೂ ಸಮಾಜ ನೀಡುವ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.